
ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಅವರಿಂದ ಗೋಮೂತ್ರ ಚಳುವಳಿ: ರಾಜಕೀಯ ಕಳಂಕದ ವಿರುದ್ಧ ವಿನೂತನ ಪ್ರತಿಭಟನೆ
ಮೈಸೂರು: ಮೈಸೂರಿನಲ್ಲಿ ನಡೆದ ರಾಜಕೀಯ ಸಮಾವೇಶದ ಹಿನ್ನಲೆಯಲ್ಲಿ, ಕನ್ನಡ ಚಳುವಳಿ ನಾಯಕ ವಾಟಾಳ್ ನಾಗರಾಜ್ ಅವರು ಅನನ್ಯ ರೀತಿಯ ಪ್ರತಿಭಟನೆ ನಡೆಸಿದ್ದಾರೆ. ಅವರು ಗೋಮೂತ್ರ ಸಿಂಪಡಣೆ ಮೂಲಕ “ಕಳ್ಳರು, ಸುಳ್ಳರು, ಭ್ರಷ್ಟರ ಪಾಪದ ಧೂಳು” ಮೈಸೂರಿಗೆ ತಲುಪಿದೆ, ಅದನ್ನು ತೊಲಗಿಸಲು ಈ ಚಳುವಳಿ ಎಂದು ಘೋಷಿಸಿದರು.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಈ ವಿನೂತನ ಪ್ರತಿಭಟನೆ ನಡೆಯಿತು. ಅಪವಿತ್ರವಾದ ಮೈಸೂರು ಶುದ್ಧವಾಗಲಿ ಎಂಬ ಉದ್ದೇಶದಿಂದ ಗೋಮೂತ್ರ ಸಿಂಪಡಣೆ ಮಾಡಿದರು. ರಾಜ್ಯ ರಾಜಕೀಯದಲ್ಲಿನ ಅವ್ಯವಸ್ಥೆ ಹಾಗೂ ನಾಯಕರ ಭ್ರಷ್ಟಾಚಾರದ ವಿರುದ್ಧ ವಾಟಾಳ್ ನಾಗರಾಜ್ ತೀವ್ರ ವಾಗ್ದಾಳಿ ನಡೆಸಿದರು.
ಆದರೆ, ಸಿಎಂ ಸಿದ್ದರಾಮಯ್ಯರ ಕುರಿತು ವಾಟಾಳ್ ಸಾಫ್ಟ್ ಕಾರ್ನರ್ ಹೊಂದಿದ್ದು, ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, “ಸಿದ್ದರಾಮಯ್ಯ ಉತ್ತಮ ವ್ಯಕ್ತಿ. ಇವರು ರಾಜ್ಯ ರಾಜಕಾರಣದಲ್ಲಿ ಇರಬೇಕು, ಇತರರಂತೆ ಕಳ್ಳ, ಸುಳ್ಳು, ಭ್ರಷ್ಟನಲ್ಲ” ಎಂದು ಹೇಳಿದರು. “ಬೇರೆ ಮುಖ್ಯಮಂತ್ರಿಗಳೊಂದಿಗೆ ಹೋಲಿಸಿದರೆ, ಸಿದ್ದರಾಮಯ್ಯ ಪ್ರಾಮಾಣಿಕರು” ಎಂದು ವಾಟಾಳ್ ನಾಗರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭ, ವಾಟಾಳ್ ನಾಗರಾಜ್ ಸಿಎಂ ಸಿದ್ದರಾಮಯ್ಯರ ಮೇಲೆ ಗೌರವವಿರುವುದಾಗಿ, ಆದರೆ ಅದನ್ನು ಸಾಫ್ಟ್ ಕಾರ್ನರ್ ಎಂದರಲ್ಲ ಎಂದು ಸ್ಪಷ್ಟನೆ ನೀಡಿದರು.