
ಕೋಲಾರ: ಮೌಲ್ಯ ಚಾರಿಟಿಬಲ್ ಟ್ರಸ್ಟ್ ಹಣಕಾಸು ಸಂಸ್ಥೆಯೊಂದು, ತುರ್ತಾಗಿ ಸಾಲ ನೀಡುವುದಾಗಿ ನಂಬಿಸಿ ಮುಗ್ಧ ಜನರಿಂದ ಹಣ ಕಟ್ಟಿಸಿಕೊಂಡು ಸಾಲ ನೀಡದೇ ಟೋಪಿ ಹಾಕಿದ ಘಟನೆ ನಗರದ ಕಠಾರಿಪಾಳ್ಯದಲ್ಲಿ ಬೆಳಕಿಗೆ ಬಂದಿದ್ದು, ಮೋಸ ಹೋದವರು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೇಟ್ಟಿಲೇರಿದ್ದಾರೆ.
ದಾಖಲೆ ಹಾಗೂ ಬಡ್ಡಿ ರಹಿತವಾಗಿ 2ಲಕ್ಷ ಲೋನ್ ನೀಡುವುದಾಗಿ ಜಿಲ್ಲೆಯ ಬಡವರು ಹಾಗೂ ಸ್ತ್ರೀ ಶಕ್ತಿ ಸಂಘದವರಿಂದ ಹಣ ಪಡೆದು ಸರಿಯಾದ ಸಮಯಕ್ಕೆ ಸಾಲವನ್ನು ನೀಡದೆ ವಂಚಿಸಿರುವ ಮೌಲ್ಯ ಚಾರಿಟಿಬಲ್ ಟ್ರಸ್ಟ್ ಕಚೇರಿಯ ಮುಂದೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಸೋಮವಾರ ಗಲಾಟೆ ಮಾಡಿದ ಕಾರಣ ಪೊಲೀಸರು ಸ್ಥಳಕ್ಕೆ ಬಂದು ಹತೋಟಿಗೆ ತೆಗೆದುಕೊಂಡರು.
ಬಡವರು ಹಾಗೂ ಸ್ತ್ರೀ ಶಕ್ತಿ ಸಂಘದ ಮಹಿಳೆಯರಿಂದ 15 ರಿಂದ 20 ಸಾವಿರ ಹಣ ಪಡೆದು ಸಂಸ್ಥೆಯ ಹೆಸರಲ್ಲಿ ರಸೀದಿ ನೀಡಿ, ಸಾಲದ ಹಣವನ್ನು ನೀಡದೆ ಸತಾಯಿಸುತ್ತಿರುವ ಕಾರಣ ಮಹಿಳೆಯರು ಆಕ್ರೋಶ ಹೊಂದಿ, ಸಂಸ್ಥೆಯ ನೌಕರರ ಮೇಲೆ ಮುಗಿಬಿದ್ದರು. ಸನ್ನಿವೇಶ ಬೇರೆ ರೀತಿ ಹೋಗುತ್ತಿರುವ ಕಾರಣ ಸ್ಥಳಕ್ಕೆ ಪೊಲೀಸರು ಧಾವಿಸಿ ನೌಕರರನ್ನು ಠಾಣೆಗೆ ಕರೆದುಕೊಂಡು ಹೋದರು.
ಹಣ ಕಳೆದುಕೊಂಡಿರುವ ಮಹಿಳೆಯರು ಮಾತನಾಡಿ, ಸ್ತ್ರೀ ಶಕ್ತಿ ಸಂಘದ ಮಹಿಳೆಯರಿಂದ, ಬಡವರಿಂದ ಹದಿನೈದು ಸಾವಿರ, ಇಪ್ಪತ್ತು ಸಾವಿರ ಹಣ ಪಡೆದು ಬಡ್ಡಿ ರಹಿತ 2ಲಕ್ಷ ಸಾಲ ನೀಡುವುದಾಗಿ ನಂಬಿಸಿ ಹಣ ಕಟ್ಟಿಸಿಕೊಂಡಿದ್ದಾರೆ. ನಾವು ಯಾರೋ ಮಾತು ಕೇಳಿ ಹಣವನ್ನು ಕಟ್ಟಿ ಅವರು ನೀಡುವ ಸಾಲದಿಂದ ಜೀವನ ನಡೆಸಲು ಯಾವುದಾದರೂ ವ್ಯಾಪಾರ ಮಾಡಲು ಅನುಕೂಲವಾಗುತ್ತದೆ ಎಂದು ಹಣ ಕಟ್ಟಿದ್ದೇವೆ. ಆದರೆ, ಸರಿಯಾದ ಸಮಯಕ್ಕೆ ಸಾಲವನ್ನು ನೀಡದೇ, ದಿನಗಳನ್ನು ಕಳೆದುಕೊಂಡು ಬರುತ್ತಿರುವ ಕಾರಣ, ಅನುಮಾನಗೊಂಡು ನಾವೆಲ್ಲರೂ ಒಟ್ಟಿಗೆ ಇಂದು ಕಚೇರಿಯನ್ನು ಮುತ್ತಿಗೆ ಹಾಕಿದ್ದೇವೆ. ಬೆಂಗಳೂರಿನ ಕೇಂದ್ರ ಕಚೇರಿಯಿಂದ ತಮಗೆಲ್ಲರಿಗೂ ಹಣ ನೀಡುತ್ತೇವೆ ಎಂದು ಈಗಲೂ ಹೇಳುತ್ತಿದ್ದಾರೆ. ನಮಗೆ ನಂಬಿಕೆ ಇಲ್ಲ ನಾವು ಕಟ್ಟಿರುವ ಹಣವನ್ನು ನಮಗೆ ನೀಡಿ. ಇಲ್ಲವೇ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.