
ತುಮಕೂರು: ಹೇಮಾವತಿ ನಾಲೆಯನ್ನು ಡೈವರ್ಟ್ ಮಾಡಿ ರಾಮನಗರ ಜಿಲ್ಲೆಯ ಮಾಗಡಿ ಮತ್ತಿತರರ ಕಡೆಗಳಿಗೆ ನೀರು ತೆಗೆದುಕೊಂಡು ಹೋಗುವ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ನಿಂದ ಇಡೀ ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ತೊಂದರೆಯಾಗುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು, ಜನರು ಪಕ್ಷಾತೀತವಾಗಿ ಮೇ.16 ರಂದು ನಡೆಯುವ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಜಿ ಶಾಸಕ ಹೆಚ್.ನಿಂಗಪ್ಪ ಮನವಿ ಮಾಡಿದರು.
ಖಾಸಗಿ ಹೊಟೇಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,10 ಅಡಿ ವ್ಯಾಸದ ಕೊಳವೆ ಮೂಲಕ ಗ್ರಾವಿಟಿಯಲ್ಲಿ ನೀರು ತೆಗೆದುಕೊಂಡು ಹೋಗಲು ಕಾಮಗಾರಿ ನಡೆಯುತ್ತಿದ್ದು,ಯೋಜನೆ ಜಾರಿಗೆ ಬಂದರೆ, ನಾಲಾ ವಲಯದ ಇತರೆ ತಾಲೂಕುಗಳಿಗೆ ಕುಡಿಯುವ ನೀರು ಇಲ್ಲದಂತಾಗುತ್ತದೆ. ಹಾಗಾಗಿ ನಮ್ಮ ನೀರು, ನಮ್ಮ ಹಕ್ಕು ಎಂಬ ಭಾವನೆಯಿಂದ ಜಿಲ್ಲೆಯ ಜನರು ಸ್ವಯಂ ಪ್ರೇರಿತರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದರು.
ಮಾಗಡಿ ತಾಲೂಕಿನ ಶ್ರೀರಂಗ ಏತ ನೀರಾವರಿಗೆ ಸೋರ್ಸ್ ಆಗಿ ಕುಣಿಗಲ್ ತಾಲ್ಲೂಕಿಗೆ ಹಂಚಿಕೆಯಾಗಿರುವ 3 ಟಿ.ಎಂ.ಸಿ ಹೇಮಾವತಿ ನೀರನ್ನು ಬಳಕೆ ಮಾಡಲು ರಾಜಕೀಯ ದುರುದ್ದೇಶದಿಂದ ಯೋಜನೆಯನ್ನು ರೂಪಿಸಲಾಗಿದೆ.ಹೇಮಾವತಿ ನಾಲೆಯ 70 ಕಿ.ಮಿ.ಯಿಂದ ಡಿ.ರಾಂಪುರದಿಂದ ನಾಲೆಯನ್ನು ಡೈವರ್ಟ್ ಮಾಡಿ ಕುಣಿಗಲ್ ಬಳಿ ಇರುವ ನಾರನಹಳ್ಳಿ ಬಳಿ ನಾಲಾ 197 ಕಿ.ಮಿ.ಗೆ ಸೇರಿಸುವ ಸುಮಾರು 35 ಕಿ.ಮಿ.ಯೋಜನೆ ಇದಾಗಿದ್ದು,ಈಗಾಗಲೇ ಸರಕಾರಿ ಭೂಮಿಯಲ್ಲಿ ಪೈಫ್ಲೈನ್ ಅಳವಡಿಸಲು ಕಾಮಗಾರಿ ಆರಂಭವಾಗಿದೆ.ಇದರಿಂದ ಗುಬ್ಬಿ,ಮಧುಗಿರಿ, ಕೊರಟಗೆರೆ, ತುಮಕೂರು ನಗರ, ತುಮಕೂರು ಗ್ರಾಮಾಂತರ ತಾಲೂಕುಗಳಲ್ಲದೆ, ಸುಮಾರು 27 ಏತ ನೀರಾವರಿ ಯೋಜನೆಗಳಿಗೆ ನೀರಿನ ಕೊರತೆ ಉಂಟಾಗಲಿದೆ.ಈಗಲೇ ತಡೆಯದಿದ್ದರೆ ಮುಂದೆ ದೊಡ್ಡ ಅನಾಹುತಕ್ಕೆ ನಾವುಗಳೇ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಹೆಚ್.ನಿಂಗಪ್ಪ ತಿಳಿಸಿದರು.
ಇದಕ್ಕೆ ಇಡೀ ಜಿಲ್ಲೆಯಾದ್ಯಂತ ಜನರು ವಿರೋಧ ವ್ಯಕ್ತಪಡಿಸುತಿದ್ದು, ಸರಕಾರ ಯೋಜನೆಯನ್ನು ರದ್ದು ಪಡಿಸದಿದ್ದರೆ ಹಂತ ಹಂತವಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ಹೆಚ್.ನಿಂಗಪ್ಪ ನುಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ,ಗೂಳೂರು ನವೀನ್ಗೌಡ, ನಾಗವಲ್ಲಿ ರಾಮಣ್ಣ, ಹೆಬ್ಬೂರು ಗೋವಿಂದರಾಜು,ಉರ್ಡಿಗೆರೆ ಲಕ್ಷ್ಮಿನಾರಾಯಣ, ಲೋಕೇಶ್, ಗೋವಿಂದಪ್ಪ ಮತ್ತಿತರರು ಉಪಸ್ಥಿತರಿದ್ದರು.
