
ಬೆಂಗಳೂರು: ಬಿಬಿಎಂಪಿ (ಬೆಂಗಳೂರು ಮಹಾನಗರ ಪಾಲಿಕೆ) ಅಸಾಂಕ್ರಾಮಿಕ ರೋಗಗಳ ಬಗ್ಗೆ ಸಮಗ್ರ ಸರ್ವೆ ಕಾರ್ಯವನ್ನು ಪ್ರಾರಂಭಿಸಿದೆ. ಮಾನಸಿಕ ಒತ್ತಡ, ರಕ್ತದೊತ್ತಡ, ಮಧುಮೇಹ ಸೇರಿದಂತೆ ಹಲವು ಅಸಾಂಕ್ರಾಮಿಕ ರೋಗಗಳು ನಗರ ಜೀವನದ ಪರಿಣಾಮವಾಗಿ ಹರಡುತ್ತಿದ್ದು, ಇದರಿಂದಾಗುವ ಸಾವು-ನೋವುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಬಿಬಿಎಂಪಿ ಈ ಸರ್ವೆ ಮುಂದಾಗುತ್ತಿದೆ.
ಸಂಶೋಧನೆಗಳಿಂದ ತಿಳಿದುಬಂದಂತೆ, ಶೇ.74 ರಷ್ಟು ಸಾವುಗಳು ಅಸಾಂಕ್ರಾಮಿಕ ರೋಗಗಳಿಂದಲೇ ಸಂಭವಿಸುತ್ತಿದ್ದು, ಇದನ್ನು ತಡೆಯಲು ಮುನ್ನೆಚ್ಚರಿಕೆಯ ಚಿಕಿತ್ಸೆ ಮತ್ತು ಸೂಕ್ತ ಸಲಹೆ ನೀಡುವುದು ಸರ್ವೆಯ ಪ್ರಮುಖ ಉದ್ದೇಶವಾಗಿದೆ. ಬಿಬಿಎಂಪಿಯು ಸದ್ಯ ವಸಂತಪುರ ಮತ್ತು ಕೊಡಿಗೇಹಳ್ಳಿ ವಾರ್ಡ್ಗಳಲ್ಲಿ ಈ ಸರ್ವೆ ಕಾರ್ಯವನ್ನು ಪ್ರಗತಿಪಡಿಸುತ್ತಿದೆ. ಶೀಘ್ರದಲ್ಲಿಯೇ 10 ವಾರ್ಡ್ಗಳಲ್ಲಿ ಸರ್ವೆ ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ, ಮತ್ತು ಹಂತ ಹಂತವಾಗಿ ಬಿಬಿಎಂಪಿಯ ಎಲ್ಲಾ 225 ವಾರ್ಡ್ಗಳಲ್ಲಿ ಈ ಕಾರ್ಯವನ್ನು ಮುಗಿಸಲು ಯೋಜನೆ ರೂಪಿಸಲಾಗಿದೆ.
ಪ್ರತಿ ವಾರ್ಡ್ನಲ್ಲಿ 4000 ಜನರನ್ನು ಒಳಗೊಂಡಂತೆ, ಒಟ್ಟು 9 ಲಕ್ಷ ಮಂದಿಗೆ ಈ ಸರ್ವೆ ಮಾಡಲಾಗುವುದು. ಪ್ರತಿದಿನ 20 ಮಂದಿಗೆ ಮಾತ್ರ ಸಮೀಕ್ಷೆ ನಡೆಯಲಿದ್ದು, ಈ ಸರ್ವೆ ಕಾರ್ಯ ಒಂದು ವರ್ಷ ಕಾಲಕ್ಕೆ ವಿಸ್ತರಿಸಲ್ಪಟ್ಟಿದೆ. 2025ರ ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ಈ ಸರ್ವೆ ಕಾರ್ಯ ಮುಗಿಯುವ ನಿರೀಕ್ಷೆ ಇದೆ.
ಈ ಸರ್ವೆ ಪ್ರಕ್ರಿಯೆಗೆ ಎಐ ನೆಕ್ಸಸ್ ಎಂಬ ಸಂಸ್ಥೆಯು ಬಿಬಿಎಂಪಿಯು ಬಳಸುವ ಆ್ಯಪ್ನ್ನು ಅಭಿವೃದ್ಧಿಪಡಿಸಿದೆ. ಈ ಆ್ಯಪ್ ಮೂಲಕ ಬೆರಳಿನ ಸ್ಪರ್ಶದಿಂದ ಬಿಪಿ, ಪಲ್ಸ್ ರೇಟ್, ಆಕ್ಸಿಜನ್ ಮಟ್ಟದ ಅಂಕಿ ಅಂಶಗಳನ್ನು ದಾಖಲಿಸಲಾಗುತ್ತದೆ. ಮಧುಮೇಹಕ್ಕೆ ಮಾತ್ರ ರಕ್ತದ ಮಾದರಿ ಪಡೆದು, ಸಾಂಪ್ರದಾಯಿಕ 5 ಮಾದರಿಗಳ ಪರೀಕ್ಷೆ ನಡೆಸಲಾಗುತ್ತದೆ.
ಆ್ಯಪ್ ಮೂಲಕ ಸರ್ವೇ ಮಾಡಿದ ಡೇಟಾ, ಬಿಬಿಎಂಪಿಯ ಯುಪಿಎಚ್ಸಿಗೆ (ಯುನಿಟ್ ಪ್ರೈಮರಿ ಹೆಲ್ತ್ ಸೆಂಟರ್) ಸಲ್ಲಿಕೆಯಾಗುತ್ತದೆ. ತಕ್ಷಣ ಚಿಕಿತ್ಸೆ ಅಗತ್ಯವಿರುವವರಿಗೆ, ಆಸ್ಪತ್ರೆಗೆ ಉಚಿತವಾಗಿ ಚಿಕಿತ್ಸೆ ಪಡೆಯುವ ವ್ಯವಸ್ಥೆ ನೀಡಲಾಗಿದೆ. ಮಾಸಿಕ ಒತ್ತಡ ಅಥವಾ ಮಾದಕ ವ್ಯಸನಿಗಳಿಗೂ ಕೌನ್ಸಿಲಿಂಗ್ ಸೇವೆಗಳನ್ನು ಒದಗಿಸಲಾಗುತ್ತದೆ.
ಬಿಬಿಎಂಪಿ ಆರೋಗ್ಯ ಸಿಬ್ಬಂದಿ ಮತ್ತು ರೋಟರಿ ಸಂಸ್ಥೆಯಿಂದ ಒಬ್ಬ ಸ್ವಯಂ ಸೇವಕರನ್ನು ನಿಯೋಜಿಸಲಾಗಿದ್ದು, ಈ ಇಬ್ಬರ ತಂಡ ಪ್ರತಿ ವಾರ್ಡ್ನಲ್ಲಿ ಸರ್ವೆ ಕಾರ್ಯವನ್ನು ನಡೆಸಲಿದೆ.