
ಬೆಳಗಾವಿ: ಬೆಳಗಾವಿ ಜಿಲ್ಲೆಯ ಸಾಂಬ್ರಾ ವಿಮಾನ ನಿಲ್ದಾಣ ವಿಸ್ತರಣೆ ಕಾಮಗಾರಿಗಾಗಿ ತಮ್ಮ ಜಮೀನನ್ನು ಕೊಟ್ಟಿದ್ದ ರೈತರಿಗೆ ಪರಿಹಾರ ನೀಡಲು ವಿಳಂಬವಾಗಿದ್ದರಿಂದ, ನ್ಯಾಯಾಲಯದ ಆದೇಶದ ಮೇರೆಗೆ ರೈತರು ಬೆಳಗಾವಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿನ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಈ ಘಟನೆ ಬೆಳಗಾವಿ ಡಿಸಿ ಕಚೇರಿ ಆವರಣದಲ್ಲಿನ ಎಸಿ ಕಚೇರಿಯಲ್ಲಿ ನಡೆದಿದೆ, ಇನ್ನು ರೈತರು ಕಚೇರಿಯ ಕಂಪ್ಯೂಟರ್, ಪ್ರಿಂಟರ್, ಕುರ್ಚಿಗಳು ಸೇರಿದಂತೆ ಪೀಠೋಪಕರಣಗಳನ್ನು ಹೊತ್ತೊಯ್ಯುವ ಮೂಲಕ ತಮ್ಮ ಆಕ್ರೋಶವನ್ನು ತೋರಿಸಿದರು.
2008ರಲ್ಲಿ ಸಾಂಬ್ರಾ ವಿಮಾನ ನಿಲ್ದಾಣ ವಿಸ್ತರಣೆಗಾಗಿ 270 ಎಕರೆ ಜಮೀನು ನೀಡಿದ ರೈತರು, ಸರ್ಕಾರ ನೀಡಿದ ಅಲ್ಪ ಪ್ರಮಾಣದ ಪರಿಹಾರದ ವಿರುದ್ಧ 2011ರಲ್ಲಿ ಕೋರ್ಟ್ ಮೊರೆ ಹೋಗಿದ್ದರು. 2018ರಲ್ಲಿ ನ್ಯಾಯಾಲಯ ಪ್ರತಿ ಗುಂಟೆಗೆ ₹40,000 ಪರಿಹಾರ ನೀಡುವಂತೆ ಆದೇಶಿಸಿದರೂ, ಸರಿಯಾದ ಸಮಯಕ್ಕೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ರೈತರು ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು.
2021ರಲ್ಲಿ ಮತ್ತೊಮ್ಮೆ ನ್ಯಾಯಾಲಯ ರೈತರಿಗೆ ತಕ್ಷಣವೇ ನ್ಯಾಯಯುತ ಪರಿಹಾರ ನೀಡುವಂತೆ ಆದೇಶಿಸಿದೆ. ಆದರೆ, ಸರ್ಕಾರದ ನಿರ್ಲಕ್ಷ್ಯದಿಂದ ಪರಿಹಾರ ಸಿಗದೆ ಇರುವ ಕಾರಣ, ಇಂದು ನ್ಯಾಯಾಲಯದ ಆದೇಶದ ಪ್ರಕಾರ ರೈತರು ಎಸಿ ಕಚೇರಿಯಲ್ಲಿನ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಇನ್ನು ಜಮೀನು ಕೊಟ್ಟ 20 ರೈತರಿಗೆ ಒಟ್ಟು 8 ಕೋಟಿ ರೂಪಾಯಿ ಪರಿಹಾರ ಬಾಕಿ ಇದ್ದು, ಸರಕಾರದ ವಿಳಂಬದಿಂದ ತೊಂದರೆ ಅನುಭವಿಸುತ್ತಿರುವ ರೈತರು, ತಮ್ಮ ಹಕ್ಕಿಗಾಗಿ ಹೋರಾಟ ಮುಂದುವರಿಸಿದ್ದಾರೆ.