
ಬೆಳಗಾವಿ – ರಾಜ್ಯಮಟ್ಟದ ಸರ್ಕಾರಿ ನೌಕರರ ಸಂಘದ 2023-24ನೇ ಸಾಲಿನ ಟೇಬಲ್ ಟೆನ್ನಿಸ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾಗ್ಯಶ್ರೀ ಎಂ. ಪವಾರ, ಬೆಳಗಾವಿ ವಿಭಾಗದ ಶಿಕ್ಷಣ ಇಲಾಖೆ ಸಹನಿರ್ದೇಶಕರ ಕಚೇರಿಯ ಅಧೀಕ್ಷಕಿ, ಉತ್ತಮ ಸಾಧನೆ ಮಾಡಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಮೂಲಕ ಅವರು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಆ. 17, 18, ಮತ್ತು 19 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಈ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ, ಭಾಗ್ಯಶ್ರೀ ಪವಾರ ತಮ್ಮ ಕ್ರೀಡಾ ಕೌಶಲ್ಯವನ್ನು ತೋರಿಸಿ, ಕ್ವಾರ್ಟರ್ ಫೈನಲ್ ನಲ್ಲಿ ಐದು ಸೆಟ್ ಗಳ ಪೈಕಿ ಮೂರು ಸೆಟ್ ಗೆದ್ದು ಸೆಮಿ ಫೈನಲ್ ಗೆ ಪ್ರವೇಶ ಪಡೆದರು. ಸೆಮಿ ಫೈನಲ್ನಲ್ಲಿ ಉತ್ಕೃಷ್ಟ ಪ್ರದರ್ಶನ ನೀಡಿದ ಭಾಗ್ಯಶ್ರೀ, ಫೈನಲ್ ನಲ್ಲಿ ಮಂಗಳೂರಿನ ವಿಶಾಲಾ ಅವರ ಎದುರಾಳಿ. ರೋಚಕ ಪಂದ್ಯದಲ್ಲಿ ಐದು ಸೆಟ್ ಗಳಲ್ಲಿ ವಿಶಾಲಾ ಮೂರು ಗೆದ್ದು ಪ್ರಥಮ ಸ್ಥಾನ ಪಡೆದಾಗ, ಭಾಗ್ಯಶ್ರೀ ರನ್ನರ್ ಆಫ್ ಆಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮೂಲತಃ ವಿಜಯಪುರದವರಾದ ಭಾಗ್ಯಶ್ರೀ ಪವಾರ, ಎರಡು ದಶಕಗಳಿಂದ ಬೆಳಗಾವಿಯಲ್ಲಿಯೇ ನೆಲೆಸಿದ್ದು, ಹಲವಾರು ವರ್ಷಗಳಿಂದ ಅಥ್ಲೆಟಿಕ್ಸ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು, ಈಗ ಟೇಬಲ್ ಟೆನ್ನಿಸ್ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ವಿಭಾಗೀಯ ಕಾರ್ಯದರ್ಶಿ ಹಾಗೂ ಸಹನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ ಅವರು ಭಾಗ್ಯಶ್ರೀ ಪವಾರ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
