
ಮುಗಿದ ಉಪ ಸಮರ; ಸೋಲು ಗೆಲುವಿನ ಲೆಕ್ಕಚಾರರಾಜ್ಯದ ಮಿನಿ ಸಮರವೆಂದೇ ಬಿಂಬಿಸಲಾಗಿದ್ದ ಹಾಗೂ ಆಡಳಿತ ಮತ್ತು ಪ್ರತಿಪಕ್ಷಗಳ ಪ್ರತಿಷ್ಠೆಯ ಕಣವಾಗಿದ್ದ ರಾಜ್ಯದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ನಿನ್ನೆ ಶಾಂತಿಯುತ ಮತದಾನವಾಗಿದ್ದು, ಫಲಿತಾಂಶಕ್ಕಾಗಿ ನ.೨೩ರವರೆಗೆ ಕಾಯಬೇಕಿದೆ. ಬುಧವಾರ ಸಂಜೆ ಮತದಾನ ಮುಗಿಯುತ್ತಿದ್ದಂತೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ನಾಯಕರು, ಮುಖಂಡರು, ಕಾರ್ಯಕರ್ತರು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ತಮ ತಮ ಪಕ್ಷಗಳ ಕಾರ್ಯಕರ್ತರು ಹಾಗೂ ಹಿತೈಷಿಗಳ ಮೂಲಕ ಮತಗಟ್ಟೆವಾರು ಮಾಹಿತಿ ಪಡೆದು ಫಲಿತಾಂಶ ಏನಾಗಬಹುದು ಎಂಬ ಅಂದಾಜಿನಲ್ಲಿ ನಿರತರಾಗಿದ್ದಾರೆ.
ಈ ಮೂರು ಕ್ಷೇತ್ರಗಳ ಮತದಾರರು ಒಟ್ಟು 45 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧಾರ ಮಾಡಿದ್ದಾರೆ. ಅಭ್ಯರ್ಥಿಗಳ ಭವಿಷ್ಯ ಅಡಗಿರುವ ಮತಯಂತ್ರಗಳನ್ನು ಆಯಾ ಕ್ಷೇತ್ರದ ಸ್ಟ್ರಾಂಗ್ ರೂಂನಲ್ಲಿ ಇರಿಸಿದ್ದು, ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಮತದಾನ ಮುಕ್ತಾಯವಾದ ನಂತರ ಮತ ಯಂತ್ರಗಳನ್ನು ಮತ ಎಣಿಕೆ ಕೇಂದ್ರಗಳಲ್ಲಿನ ಎಲ್ಲಾ ಸ್ಟ್ರಾಂಗ್ ರೂಮ್ನಲ್ಲಿ ತಂದಿಡಲಾಗಿದೆ. ನ.23ರಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಅಂದು ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರ ಬೀಳಲಿದೆ.ತೀವ್ರ ಕುತೂಹಲ ಕೆರಳಿಸಿದ್ದ ಹಾಗೂ ಹೈವೋಲ್ಟೇಜ್ ಕ್ಷೇತ್ರವೆಂದೇ ಪರಿಗಣಿಸಲಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು ರಾಮನಗರದ ಸರ್ಕಾರಿ ಎಂಜಿನಿಯರಿಗ್ ಕಾಲೇಜಿನಲ್ಲಿ ನಡೆಯಲಿದೆ.
ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ ಸೇರಿದಂತೆ 31 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಶಿಗ್ಗಾಂವಿ ಕ್ಷೇತ್ರದ ಮತ ಎಣಿಕೆ ಹಾವೇರಿ ಜಿಲ್ಲೆ ದೇವಗಿರಿಯ ಸರ್ಕಾರಿ ಎಂಜಿನಿಯರಿಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಅವರ ಪುತ್ರ ಭರತ್ ಬೊಮಾಯಿ, ಕಾಂಗ್ರೆಸ್ ಅಭರ್ಥಿಯಾಗಿ ಪಠಾಣ ಯಾಸಿರ ಅಹದ್ ಖಾನ್ ಸೇರಿದಂತೆ ೮ ಅಭ್ಯರ್ಥಿಗಳು ಕಣದಲ್ಲಿದ್ದರು. ಸಂಡೂರು ಕ್ಷೇತ್ರದ ಮತ ಎಣಿಕೆಯು ಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನ.೨೩ರಂದು ನಡೆಯಲಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಗಾರ ಹನುಮಂತ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದ ಇ. ತುಕರಾಂ ಅವರ ಪತ್ನಿ ಇ.ಅನ್ನಪೂರ್ಣ ಸೇರಿದಂತೆ ೬ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ದಾಖಲೆಯ ಮತದಾನ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ 276 ಮತಗಟ್ಟೆಯಲ್ಲಿ 1,00,501 ಪುರುಷ ಮತದಾರರು ಹಾಗೂ 1,06,376 ಮಹಿಳಾ ಮತದಾರರು ಮತ್ತು ಇತರ 3 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟು 2,06,866 ಮತಗಳು ಚಲಾವಣೆಯಾಗಿವೆ. ಶೇ. 88.80 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ 241 ಮತಗಟ್ಟೆಗಳಲ್ಲಿ ಒಟ್ಟು98,642 ಪುರುಷರು ಹಾಗೂ 92,522 ಮಹಿಳೆಯರು ಮತ್ತು ಇತರ 2 ಸೇರಿ ಒಟ್ಟು 1,91,166 ಜನರು ಮತಹಕ್ಕನ್ನು ಚಲಾಯಿಸಿದ್ದು, ಶೇ.80.48 ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ ಎಂದು ಎಂದು ಹಾವೇರಿ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಡಾ.ವಿಜಯಮಹಾಂತೇಶ ದಾನಮನವರ ಅವರು ತಿಳಿಸಿದ್ದಾರೆ. ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಶೇ.76.24ರಷ್ಟು ಮತದಾನವಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಹಾಗೂ ನಡೆಯುತ್ತಿರುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಉಪ ಚುನಾವಣೆ ಫಲಿತಾಂಶ ರಾಜ್ಯದಲ್ಲಿ ಹೊಸ ರಾಜಕೀಯ ಸಮೀಕರಣಕ್ಕೆ ಹಾಗೂ ಬದಲಾವಣೆಗೆ ಮುನ್ನುಡಿ ಆಗಬಹುದು ಎಂಬುದು ಗೋಚರಿಸುತ್ತದೆ.
ಆಡಳಿತ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ನಾಯಕರುಗಳ ನಡುವೆ ನಡೆಯುತ್ತಿರುವ ಶೀತಲ ಸಮರ, ಪ್ರತಿಪಕ್ಷ ಬಿಜೆಪಿಯಲ್ಲಿ ಹಾಲಿ ರಾಜ್ಯಾಧ್ಯಕ್ಷರ ವಿರುದ್ಧವೇ ಆರಂಭಗೊಂಡಿರುವ ಬಂಡಾಯ, ಬಿಜೆಪಿ ಜತೆಗಿನ ಮೈತ್ರಿಯ ನಡುವೆಯೂ ಸ್ವತಂತ್ರ ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್ ನಡೆಸುತ್ತಿರುವ ಪರದಾಟ ಇವೇ ಮೊದಲಾದ ಸಂಗತಿಗಳಿಗೆ ಈ ಉಪ ಚುನಾವಣೆ ಫಲಿತಾಂಶ ಸ್ಪಷ್ಟ ಉತ್ತರ ನೀಡುವ ನಿರೀಕ್ಷೆ ಇದೆ.
ರಾಜ್ಯದಲ್ಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮುಂದಿನ ಮೇ ತಿಂಗಳಿಗೆ ಎರಡು ವರ್ಷ ಪೂರ್ಣವಾಗಲಿದೆ. ಪಕ್ಷದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿರುವ ಆಂತರಿಕ ಒಪ್ಪಂದದ ಪ್ರಕಾರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ತ್ಯಜಿಸಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಡಬೇಕಿದೆ. ಆದರೆ ಸದ್ಯದ ರಾಜಕೀಯ ಸ್ಥಿತಿಗತಿ ಗಮನಿಸಿದರೆ ಅಧಿಕಾರ ಹಸ್ತಾಂತರ ಆಗುವ ಯಾವುದೇ ಸೂಚನೆಗಳು ಇಲ್ಲ. ಉಪ ಚುನಾವಣೆ ನಡೆದಿರುವ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಫಲಿತಾಂಶ ಏನಾಗುತ್ತದೆ? ಎಂಬುದೂ ಕೂಡ ಆ ಪಕ್ಷದಲ್ಲಿನ ಮುಂದಿನ ಎಲ್ಲ ಬೆಳವಣಿಗೆಗಳನ್ನು ನಿರ್ಣಯಿಸುತ್ತದೆ.
ಮೂರು ಕ್ಷೇತ್ರಗಳ ಪೈಕಿ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ತಮ್ಮ ಇಡೀ ಗಮನವನ್ನು ಅವರು ಈ ಕ್ಷೇತ್ರದ ಮೇಲೆಯೇ ಹೆಚ್ಚಾಗಿ ಕೇಂದ್ರೀಕರಿಸಿದ್ದಲ್ಲದೇ ಇದನ್ನೊಂದು ರಾಜಕೀಯ ಸವಾಲಾಗಿ ತೆಗೆದುಕೊಂಡಿರುವುದರಿAದ ಸಹಜವಾಗೇ ಫಲಿತಾಂಶದತ್ತ ಗಮನ ಕೇಂದ್ರೀಕೃತವಾಗಿದೆ. ಒಕ್ಕಲಿಗರೇ ಪ್ರಧಾನವಾಗಿರುವ ಈ ಕ್ಷೆತ್ರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೂ ಸೇರಿರುವುದರಿಂದ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಸೋದರ ಡಿ.ಕೆ.ಸುರೇಶ್ ಅವರ ಸೋಲಿನಿಂದಾದ ರಾಜಕೀಯ ನಷ್ಟವನ್ನು ತುಂಬಿಕೊಳ್ಳುವ ಮೂಲಕ ಈ ಭಾಗದಲ್ಲಿ ತಮ್ಮ ಪ್ರಾಬಲ್ಯ ಸ್ಥಾಪಿಸಲು ಶಿವಕುಮಾರ್ ಪ್ರಯತ್ನ ನಡೆಸಿದ್ದು ಅದಕ್ಕಾಗಿಯೇ ಈ ಚುನಾವಣೆಯನ್ನು ಪ್ರತಿಷ್ಠೆಯ ಸವಾಲಾಗಿ ಸ್ವೀಕರಿಸಿದ್ದೂ ಆಗಿದೆ.
ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೀಶ್ವರ್ ಗೆದ್ದರೆ ತಮ್ಮ ಪರಂಪರಾನುಗತ ರಾಜಕೀಯ ಎದುರಾಳಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಪ್ರಾಬಲ್ಯದ ವಿರುದ್ಧ ಜಯ ಸಾಧಿಸಿದ ಕೀರ್ತಿ ಶಿವಕುಮಾರ್ ಅವರಿಗೆ ಸಂದAತಾಗುತ್ತದೆ.
ಒಂದು ವೇಳೆ ಫಲಿತಾಂಶ ಏರುಪೇರಾದರೆ ಕಾಂಗ್ರೆಸ್ ನಲ್ಲೇ ಅವರ ಪ್ರಾಬಲ್ಯಕ್ಕೆ ಪೆಟ್ಟು ಬಿದ್ದಂತಾಗುತ್ತದೆ. ಉಪ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕ್ಷೇತ್ರ ಕೆಲವು ಕಡೆಗಳಲ್ಲಿ ಶಿವಕುಮಾರ್ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಅವರ ಬೆಂಬಲಿಗರು ಬಿಂಬಿಸಿದ್ದರು. ಅದೇನೆ ಇರಲಿ ಫಲಿತಾಂಶ ಅವರ ರಾಜಕೀಯ ಅಸ್ತಿತ್ವಕ್ಕೆ ದೊಡ್ಡ ಸವಾಲಾಗುವ ಸಾಧ್ಯತೆಗಳನ್ನು ಸೃಷ್ಟಿ ಮಾಡುವುದಂತೂ ನಿಜ.
ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಇಲ್ಲಿ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಅವರಿಗೆ ಇದು ಮೂರನೇ ಚುನಾವಣೆ. ಮೊಮ್ಮಗನ ಪರ ಪ್ರಚಾರಕ್ಕೆ ಅನಾರೋಗ್ಯದ ನಡುವೆಯೂ ಗೌಡರು ರಣಾಂಗಣಕ್ಕೆ ಇಳಿದು ಕಾಂಗ್ರೆಸ್ ವಿರುದ್ಧ ಅಬ್ಬರಿಸಿದ್ದು, ಅವರ ಅನಾರೋಗ್ಯದ ಪರಿಸ್ಥಿತಿಯನ್ನೇ ಅನುಕಂಪದ ಅಸ್ತ್ರವಾಗಿ ಜೆಡಿಎಸ್ ಪ್ರಚಾರಕ್ಕೆ ಬಳಸಿಕೊಂಡಿದೆ. ಇದರಿಂದ ಒಂದಷ್ಟರ ಮಟ್ಟಿಗೆ ಆ ಪಕ್ಷಕ್ಕೆ ಲಾಭ ತಂದುಕೊಡುವ ನಿರೀಕ್ಷೆಯಂತೂ ಇದೆ. ಆದರೆ ಅದರ ಪ್ರಮಾಣ ಎಷ್ಟು ಎಂಬುದು ಫಲಿತಾಂಶ ಹೊರ ಬಿದ್ದ ನಂತರವಷ್ಟೇ ಗೊತ್ತಾಗಲಿದೆ.