
ಚಾಂಪಿಯನ್ಸ್ ಟ್ರೋಫಿಯ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಆಡಲಿದೆ. ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ. ಪ್ಲೇಯಿಂಗ್ ಇಲೆವೆನ್ನಲ್ಲಿ ಗೊಂದಲವಿಲ್ಲದೇ ಬಲಿಷ್ಠ ತಂಡವನ್ನು ಕಣಕ್ಕಿಳಿಸಿ ಪಂದ್ಯ ಗೆಲ್ಲವುದು ಭಾರತದ ಯೋಜನೆ. ಅದರಂತೆ ನಾಯಕ ರೋಹಿತ್ ಶರ್ಮಾ, ಹಾಗೂ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಗಮನವಿದೆ. ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ದ ಸರಣಿಯಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಫಾರ್ಮ್ ಸಮಸ್ಯೆಯಿಂದ ಹೊರಬರುವ ಸೂಚನೆ ನೀಡಿದ್ದರು. ಇಂದಿನ ಪಂದ್ಯ ಉಭಯ ಆಟಗಾರರಿಗೆ ಬ್ಯಾಟಿಂಗ್ ಲಯ ಕಂಡುಕೊಳ್ಳುವುದಕ್ಕೆ ಉತ್ತಮ ವೇದಿಕೆಯಾಗಿದೆ. ಇವರ ಜೊತೆಗೆ ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಕೂಡ ಸಮಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಬೇಕಿದೆ. ಭಾರತಕ್ಕೆ ಪ್ರಮುಖವಾಗಿ ಕಾಡುವುದು ವೇಗಿ ಜಸ್ಪೀತ್ ಬೂಮ್ರಾ ಅವರ ಅನುಪಸ್ಥಿತಿ, ಗಾಯದಿಂದ ಚೇತರಿಸಿಕೊಳ್ಳಲಾಗದೇ ಬೂಮ್ರಾ ಈ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಬೂಮ್ರಾ ಕೊರತೆಯನ್ನು ನೀಗಿಸಿಕೊಂಡು ಉತ್ತಮ ಬೌಲಿಂಗ್ ಮಾಡಬೇಕಾದ ಜವಾಬ್ದಾರಿ ತಂಡದ ಇತರೆ ಬೌಲರ್ಗಳ ಮೇಲಿದೆ. ಮೊಹಮದ್ ಶಮಿ, ಅರ್ಶ್ದೀಪ್ ಸಿಂಗ್, ಹರ್ಷಿತ್ ರಾಣಾ ಈ ಮೂವರಿಗೆ ನೇರ ಸ್ಪರ್ಧೆ ಇದ್ದು ಯಾರನ್ನು ಕಣಕ್ಕಿಳಿಸಬೇಕೆಂಬ ಗೊಂದಲವಿದೆ. ಉಳಿದಂತೆ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ,ಅಕ್ಷರ್ ಪಾಟೇಲ್ ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಆಯ್ಕೆಯಾಗುವ ನಿರೀಕ್ಷೆಯಿದೆ.

ಶಾಕ್ ನೀಡುವ ನಿಟ್ಟಿನಲ್ಲಿ ಬಾಂಗ್ಲಾದೇಶ ತಂಡ
ಭಾರತಕ್ಕೆ ಹೋಲಿಸಿಕೊಂಡರೆ ಬಾಂಗ್ಲಾದೇಶ ಮೇಲ್ನೋಟಕ್ಕೆ ದುರ್ಬಲವೆನ್ನಿಸಿಕೊಂಡರು ಯಾವುದೇ ಕ್ಷಣದಲ್ಲಿ ಆಘಾತ ನೀಡುವ ತಂಡವಾಗಿದೆ. ಅದರಲ್ಲೂ ತಂಡದಲ್ಲಿ ಮಹ್ಮೂದುಲ್ಲಾ ಸೌಮ್ಯಾ, ಮುಷ್ಫಿಕರ್ ರಹೀಂ, ನಜ್ಮುಲ್ ಹೂಸೈನ್,ಮುಸ್ತಾಫಿಜರ್ ರೆಹಮಾನ್, ತಸ್ಮೀನ್ ಅಹ್ಮದ್, ಸೇರಿದಂತೆ ಹಲವು ಅನುಭವಿ ಆಟಗಾರರು ತಂಡದಲ್ಲಿದ್ದಾರೆ. ಹೀಗಾಗಿ ಭಾರತಕ್ಕೆ ಬಾಂಗ್ಲಾದೇಶ ಸುಲಭದ ತುತ್ತು ಮಾತ್ರವಲ್ಲ..
ಪಿಚ್ ರಿಪೋರ್ಟ್
ದುಬೈ ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಕ್ಕೂ ಸವಾಲಾಗಿದ್ದು, ಪಂದ್ಯದ ಆರಂಭದಲ್ಲಿ ವೇಗಿಗಳು ಮುನ್ನಡೆ ಸಾಧಿಸಿದರೆ, ನಂತರ ಸ್ಪಿನ್ನರ್ಗಳು ಮಹತ್ವದ ಪಾತ್ರ ವಹಿಸಲಿದ್ದಾರೆ .. ಭಾರತ ಹಾಗೂ ಬಾಂಗ್ಲಾದೇಶ ಒಟ್ಟು 41 ಬಾರಿ ಮುಖಾಮುಖಿಯಾಗಿದ್ದು ಭಾರತ 32 ಬಾಂಗ್ಲಾದೇಶ 8ರಲ್ಲಿ ಗೆದ್ದಿದೆ. ಮಧ್ಯಾಹ್ನ 2:30ಕ್ಕೆ ಪಂದ್ಯ ಆರಂಭವಾಗಲಿದೆ.
ಅಭಿಷೇಕ್ ಎಸ್