Ashwaveega News 24×7 ಮಾರ್ಚ್ 17 – 2026 : ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ 51ನೇ ಹುಟ್ಟುಹಬ್ಬದ ಅಂಗವಾಗಿ ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಭಾರೀ ಸೇರ್ಪಡೆ ಕಂಡುಬಂದಿತು. ಬೆಳಗ್ಗಿನಿಂದಲೇ ಅಲ್ಲ, ರಾತ್ರಿಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ತಮ್ಮ ಪ್ರಿಯ ನಟನ ಸ್ಮಾರಕಕ್ಕೆ ಭೇಟಿ ನೀಡಿ “ಪರಮಾತ್ಮ”ನ ದರ್ಶನ ಪಡೆದರು.
ಅಪ್ಪು ಅವರ ನೆನಪಿನಲ್ಲಿ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿದರು. ಕೆಲವರು ಸಸಿ ವಿತರಣೆ ಮಾಡಿ ಪರಿಸರ ಜಾಗೃತಿ ಮೂಡಿಸಿದರೆ, ಇನ್ನೂ ಕೆಲವರು ಅನ್ನದಾನ ಸೇರಿದಂತೆ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿದರು. “ಅಪ್ಪು ಅವರು ತೋರಿಸಿದ ಹಾದಿಯಲ್ಲೇ ನಾವು ನಡೆಯುತ್ತೇವೆ, ಅವರಂತೆಯೇ ಒಳ್ಳೆಯ ಕೆಲಸಗಳನ್ನು ಮಾಡುತ್ತೇವೆ” ಎಂದು ಅಭಿಮಾನಿಗಳು ಭಾವುಕರಾಗಿ ಹೇಳಿದರು.
ಪ್ರತಿ ವರ್ಷವೂ ಪುನೀತ್ ಹುಟ್ಟುಹಬ್ಬದಂದು ಸಸಿ ವಿತರಣೆ ಮಾಡುವ ಪರಂಪರೆಯನ್ನು ಈ ವರ್ಷವೂ ಮುಂದುವರಿಸಲಾಗಿದೆ. ಈ ವೇಳೆ ಅಪ್ಪು ಸಮಾಧಿಗೆ ರಾಘಣ್ಣ ಕುಟುಂಬ ಪೂಜೆ ಸಲ್ಲಿಸಿತು. ಮತ್ತೊಂದೆಡೆ, ಚಿಕ್ಕಪ್ಪನ ಹುಟ್ಟುಹಬ್ಬದ ಅಂಗವಾಗಿ ವಿನಯ್ ಮತ್ತು ಯುವ ಕೇಕ್ ತರಿಸಿ ವಿಶೇಷವಾಗಿ ಆಚರಿಸಿದರು.
ಒಟ್ಟಾರೆ, ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದ್ದು, ಅವರ ಸ್ಮರಣೆಯಲ್ಲಿ ಸೇವಾ ಚಟುವಟಿಕೆಗಳು ಮುಂದುವರಿಯುತ್ತಿವೆ.
