
ಬೆಂಗಳೂರು: ಅಕ್ಟೋಬರ್ 23 ಇಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಸಿಪಿ ಯೋಗೇಶ್ವರ್ ವಿರುದ್ದ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಾಗ್ದಾಳಿ ಮಾಡಿದ್ದಾರೆ. ಅವರು ಮೊದಲಿಂದಲೂ ಎಲ್ಲ ಪಕ್ಷಗಳ ಜೊತೆ ಲಿಂಕ್ ಇಟ್ಟಿಕೊಂಡವರು. ಯೋಗೇಶ್ವರ್ ಬಿಜೆಪಿಯ ಕಟ್ಟಾಳು ಏನಾಗಿರಲಿಲ್ಲ, ಕಾಟಾಚಾರಕ್ಕೆ ನಮ್ಮೊಂದಿಗೆ ಇದ್ದರು ಅನ್ನಿಸುತ್ತೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಈ ಕುರಿತು ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಅಶೋಕ್ ಸಿಪಿ ಯೋಗೇಶ್ವರ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಸಾಕಷ್ಟು ಪ್ರಯತ್ನ ಮಾಡಿದ್ವಿ, ಆದರೆ ನಮ್ಮ ನಂಬಿಕೆಗೆ ಅಪಚಾರ ಮಾಡಿ ಹೋಗಿ ಹೋಗಿದ್ದಾರೆ. ಕಾಂಗ್ರೆಸ್ ಪಕ್ಷ ಸೇರಿ ಸಿಪಿ ಯೋಗೇಶ್ವರ್ ರಾಜಕೀಯ ಭವಿಷ್ಯ ಹಾಳು ಮಾಡಿಕೊಂಡಿದ್ದಾರೆ. ಅವರು ಕಾಂಗ್ರೆಸ್ ಸೇರಿದ್ದು, ನಮ್ಮ ಪಕ್ಷದ ಮೇಲೆ ಯಾವುದೇ ರೀತಿಯ ಪರಿಣಾಮ ಆಗುವುದಿಲ್ಲ. ಪಕ್ಷ ತೊರೆದು ಬಹಳಷ್ಟು ಜನ ಹೋಗಿದ್ದಾರೆ. ಲಕ್ಷಣ್ ಸವದಿ ಕಾಂಗ್ರೆಸ್ ಸೇರಿದ್ದಾರೆ. ಅವರನ್ನು ಮಂತ್ರಿ ಮಾಡಿದ್ದಾರಾ? ಜಗದೀಶ್ ಶೆಟ್ಟರ್ ಅವರು ಹೋಗದಿದ್ದರು, ಯಾವ ಸ್ಥಾನ ಕೊಟ್ಟಿದ್ದರು? ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಇದೆ ವೇಳೆ ಸಿಪಿ ಯೋಗೇಶ್ವರ್ ಸೈಕಲ್ ಗುರುತು, ಬಿಎಸ್ಪಿ ಎಲ್ಲ ಮುಗಿಸಿಕೊಂಡು ನಮ್ಮ ಪಕ್ಷಕ್ಕೆ ಬಂದವರು. ಅವರು ಸೈದ್ಧಾಂತಿಕವಾಗಿ ನಮ್ಮ ಪಕ್ಷದಲ್ಲಿ ಇದ್ದವರಲ್ಲ. ಚನ್ನಪಟ್ಟಣದಲ್ಲಿ ಬಿಜೆಪಿ ವೋಟ್ ಅಲ್ಲೇ ಇರುತ್ತೆ. ನಾನು, ಪ್ರಹ್ಲಾದ್ ಜೋಶಿ ಅವರು ಜೆಡಿಎಸ್ ಟಿಕೆಟ್ ಅಂತ ಸಿಪಿ ಯೋಗೇಶ್ವರ್ ಅವರಿಗೆ ಹೇಳಿದ್ವಿ. ಇನ್ನೂ ಹೆಚ್ಡಿ ಕುಮಾರಸ್ವಾಮಿ ಅವರು ಕೂಡ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸಿ ಎಂದು ಹೇಳಿದ್ದರು. ಆದರೆ, ಸಿಪಿ ಯೋಗೇಶ್ವರ್ ಒಪ್ಪಲಿಲ್ಲ ಎಂದು ತಿಳಿಸಿದ್ದಾರೆ.
ಅಷ್ಟೆ ಅಲ್ಲಾದೆ ಇವರು ಈಗ ಕಾಂಗ್ರೆಸ್ಗೆ ಹೋಗಿದ್ದಾರೆ, ಇದು ಪಕ್ಷಕ್ಕೆ ದ್ರೋಹ ಬಗೆದಂತೆ. ರಾಜ್ಯದ ಎಲ್ಲ ಬಿಜೆಪಿ ನಾಯಕರು ಅವರ ಪರವಾಗಿ ಇದ್ದೆವು ಟಿಕೆಟ್ ಕೊಡಿಸುವ ಸಲುವಾಗಿ ಪ್ರಯತ್ನ ಮಾಡಿದೆವು. ಬಿಜೆಪಿ ಚಿಹ್ನೆ, ಜೆಡಿಎಸ್ ಚಿಹ್ನೆ ಅಂತಲ್ಲ. ಎನ್ಡಿಎ ಗೆಲ್ಲುವುದು ಮುಖ್ಯ. ಎನ್ಡಿಎನಲ್ಲಿ ಅವರಿಗೆ ಸೀನಿಯಾರಿಟಿ ಇತ್ತು. ಈಗ ಹೋಗಿ ಲಾಸ್ಟ್ನಲ್ಲಿ ಕೂತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ. ಎನ್ಡಿಎಗೆ ಮುಖಭಂಗ ಮಾಡುವ ಉದ್ದೇಶ ಕಾಂಗ್ರೆಸ್ಗೆ ಇದೆ. ಜೆಡಿಎಸ್ನವರು ಯಾರಿಗೆ ಟಿಕೆಟ್ ಕೊಟ್ಟರು ನಾವು ಗೆಲ್ಲಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.