
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಒತ್ತುವರಿ ವಿರುದ್ಧ ಸಮರ ಸಾರಿರುವ ಬಿಬಿಎಂಪಿ ಮಾಲೀಕರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದು, ಹೀಗಾಗಿ ಸ್ಥಳಕ್ಕೆ ಬುಲ್ಡೋಜರ್ ಆಗಮಿಸಿದೆ.
ಹೌದು ಬೆಂಗಳೂರಿನ ಹೃದಯಭಾಗವಾಗಿರುವ ಮೆಜೆಸ್ಟಿಕ್ ನಲ್ಲಿ ಅಕ್ರಮ ಕಟ್ಟಡ ತೆರವಿಗೆ ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದು, ಮೆಜೆಸ್ಟಿಕ್ ನಲ್ಲಿ ದಿನಕ್ಕೆ ಸಾವಿರಾರು ಜನರು ಓಡಾಡುತ್ತಾರೆ. ಅಂತಹ ಜಾಗವನ್ನು ಕಬಳಿಸಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಇದೀಗ ಅದನ್ನು ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಬುಲ್ಡೋಜರ್ ಸಮೇತ ಸ್ಥಳಕ್ಕೆ ಬಂದಿದ್ದಾರೆ. ದಿಲೀಪ್ ಕುಮಾರ್ ಎನ್ನುವವರಿಗೆ ಸೇರಿರುವ ಕಟ್ಟಡ ಇದಾಗಿದ್ದು, ಎರಡೂವರೆಯಿಂದ ಮೂರು ಮೀಟರ್ ಫುಟ್ ಪಾತ್ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದಾರೆ.
ಕೆಲ ನಿಯಮಗಳನ್ನ ಗಾಳಿಗೆ ತೂರಿದ್ದ ಹಿನ್ನೆಲೆ ನೋಟಿಸ್ ನೀಡಲಾಗಿದ್ದು, ನೋಟಿಸ್ ಕೊಟ್ಟು ಹಲವು ದಿನ ಕಳೆದರೂ ತೆರವು ಮಾಡದೇ ನಿರ್ಲಕ್ಷ್ಯ ತೋರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿಯ ಪಶ್ಚಿಮ ವಲಯ ಆಯುಕ್ತೆ ಅರ್ಚನಾ ನೇತೃತ್ವದ ಅಧಿಕಾರಿಗಳು ಕಟ್ಟಡದ ಒತ್ತುವರಿ ಭಾಗ ತೆರವು ಕಾರ್ಯಕ್ಕೆ ಮುಂದಾಗಿದ್ದು, ಇಂದು ಬರೀ ರಸ್ತೆಯಲ್ಲಿರೋ ಕಟ್ಟಡದ ಭಾಗ ಮಾತ್ರ ತೆರವು ಮಾಡಲಾಗುತ್ತಿದೆ. ಕಟ್ಟಡ ತೆರವಿಗೆ ಇನ್ನೊಂದು ನೋಟಿಸ್ ಕೊಡಲು ಚಿಂತನೆ ನಡೆಸಿದ್ದು, ಒಂದು ವೇಳೆ ಆ ನೋಟಿಸ್ ಕೊಟ್ಟ ಬಳಿಕ ಪ್ರತಿಕ್ರಿಯೆ ಬಾರದಿದ್ದರೆ ಮತ್ತೆ ಡೆಮಾಲಿಷನ್ ಮಾಡಲು ಬಿಬಿಎಂಪಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.