
K Annamalai Speaks On One Nation One Election
(ಅಶ್ವವೇಗ) Ashwaveega News 24×7 ಜು.12: ಒಂದು ದೇಶ- ಒಂದು ಚುನಾವಣೆ ಎಂಬುದು ದಿಢೀರ್ ಆಗಿ ಮಾಡಿದ ಪರಿಕಲ್ಪನೆಯಲ್ಲ. 1952ರಿಂದ 1967ರವರೆಗೆ ಇದು ಜಾರಿಯಲ್ಲಿತ್ತು. ಬಳಿಕ ಈ ಕುರಿತಂತೆ ಚರ್ಚೆಯೂ ನಡೆದಿತ್ತು ಎಂದು ನಿವೃತ್ತ ಐಪಿಎಸ್ ಅಧಿಕಾರಿ ಹಾಗು ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.
ಒಂದು ರಾಷ್ಟ್ರ ಒಂದು ಚುನಾವಣೆ ವಿಷಯದ ಕುರಿತು ಮತ್ತಿಕೆರೆಯ ಐ.ಐ.ಎಸ್.ಸಿಯಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು. ದೇಶವು ವೇಗವಾಗಿ ಬೆಳವಣಿಗೆ ಸಾಧಿಸಬೇಕಿದೆ. ಇದಕ್ಕಾಗಿ ಚುನಾವಣಾ ವ್ಯವಸ್ಥೆಯಲ್ಲೂ ಸುಧಾರಣೆ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಹಿಂದಿನ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಒಂದೇ ಚುನಾವಣೆಯ ಸಾಧ್ಯಾಸಾಧ್ಯತೆಯ ಕುರಿತು ಅದು ದೇಶಾದ್ಯಂತ ಅಭಿಪ್ರಾಯ ಸಂಗ್ರಹಿಸಿತ್ತು. ಅರ್ಧದಲ್ಲೇ ಒಂದು ಸರಕಾರ ಅಧಿಕಾರ ಕಳೆದುಕೊಂಡರೆ ಏನು ಮಾಡಬೇಕೆಂಬ ವಿಷಯದಲ್ಲೂ ಕೋವಿಂದ್ ಸಮಿತಿ ಶಿಫಾರಸು ಮಾಡಿದೆ ಎಂದು ಹೇಳಿದರು.
1980-90ರ ನಡುವಿನ ಅವಧಿಯಲ್ಲಿ ಹೆಚ್ಚು ಸರಕಾರಗಳ ಪತನ ಆಗಿತ್ತು. 2000ನೇ ಇಸವಿಯ ಬಳಿಕ ಅದು ಕಡಿಮೆಯಾಗುತ್ತಾ ಸಾಗಿದೆ ಎಂದರು.
ಜನಸಂಖ್ಯೆಗೆ ಅನುಗುಣವಾಗಿ ಇದೀಗ ಸಂಸತ್ತಿನ ಸಂಸದರ ಸಂಖ್ಯೆಯೂ 543ರಿಂದ ಹೆಚ್ಚಾಗಲಿದೆ. ಮಹಿಳೆಯರಿಗೆ ಶೇ.33 ಮೀಸಲಾತಿಯೂ ಇರಲಿದೆ. ಜೊತೆಗೆ ಒಂದೇ ಚುನಾವಣೆಯೂ ಬರಬೇಕಿದೆ. 1971ರ ಜನಗಣತಿ ಪ್ರಕಾರ, ಬೆಂಗಳೂರಿನ ಸಂಸದರ ಸಂಖ್ಯೆ 3. ಬೆಂಗಳೂರು ಈಗ ಸುಮಾರು 3 ಕೋಟಿ ಜನರನ್ನು ಹೊಂದಿ ದೊಡ್ಡ ನಗರವಾಗಿದೆ. ಸಹಜವಾಗಿ ಬೆಂಗಳೂರಿನ ಸಂಸದರ ಸಂಖ್ಯೆ ಐದೋ, ಆರೋ, ಏಳೋ ಆಗಬಹುದು ಎಂದು ತಿಳಿಸಿದರು.
ಸಂವಾದದಲ್ಲಿ ಇವಿಎಂ ಮತದಾನದ ಕುರಿತು ಮಾತನಾಡಿದ ಅಣ್ಣಾಮಲೈ, ಇವಿಎಂ ಮತದಾನದ ಕುರಿತು ಸುಪ್ರೀಂ ಕೋರ್ಟಿನಲ್ಲಿ ಕೇಸಿದೆ. ಇವಿಎಂ ಯಂತ್ರಕ್ಕೆ ಬ್ಲೂಟೂತ್ ಆಗಲೀ ವೈಫೈ ಆಗಲೀ ಇಲ್ಲ. ಕೆಲವು ರಾಜಕೀಯ ಪಕ್ಷಗಳು ಕೋರ್ಟಿನ ಮೊರೆ ಹೋಗಿವೆ ಎಂದರು.
ಮಹಾರಾಷ್ಟ್ರ ಚುನಾವಣೆ ಕುರಿತಾಗಿ ಇದೇ ರೀತಿ ಹೇಳಲಾಗಿದೆ. ಸೋತ ಪಕ್ಷ ಕಾರಣ ಹೇಳುವುದು ಸಹಜ. ಇದು ಜಿಮ್ಗೆ ಹೋದವರು ಬಾಡಿ ಬರ್ತಾ ಇಲ್ಲ, ಉಪಕರಣ ಸರಿ ಇಲ್ಲ ಎಂದ ಹಾಗಾಯಿತು ಎಂದು ವಿಶ್ಲೇಷಿಸಿದರು.
ಕರ್ನಾಟಕದಲ್ಲಿ ಶೇ 44ರಷ್ಟು ನಗರವಾಸಿಗಳಿದ್ದಾರೆ. ತಮಿಳುನಾಡಿನಲ್ಲಿ ಶೇ 50ರಷ್ಟು ನಗರವಾಸಿಗಳು. ಸಹಜವಾಗಿ ಸಂಸದರ ಸಂಖ್ಯೆಯೂ ಶೇ 50-50ರಷ್ಟು ಆಗಲಿದೆ ಎಂದು ಅವರು ವಿವರಿಸಿದರು.
ಈಗ ತಮಿಳುನಾಡಿನಲ್ಲಿ ಶೇ 85ರಷ್ಟು ಗ್ರಾಮೀಣ ಪ್ರದೇಶದ ಸಂಸದರಿದ್ದು, ಶೇ 15ರಷ್ಟು ನಗರ ಪ್ರದೇಶದ ಸಂಸದರಿದ್ದಾರೆ ಎಂದರು. ಕ್ಷೇತ್ರಗಳ ಪುನರ್ ವಿಂಗಡಣೆ ಆದಾಗ ನಗರ ಪ್ರದೇಶದ ಹೆಚ್ಚು ಸಂಸದರು ಇರಲಿದ್ದಾರೆ ಎಂದರು.