
Ashwaveega News 24×7 ಸೆ. 23: ನಾಡಹಬ್ಬ ದಸರಾದ ನಿಮಿತ್ತ ಮೈಸೂರಿನ ಅಂಬಾವಿಲಾಸ ಅರಮನೆಯ ಮುಂಭಾಗದಲ್ಲಿ ಆಯೋಜನೆ ಮಾಡಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿವಿಧ ಬಗೆಯ ರಂಗೋಲಿಯ ಕಲಾಕೃತಿಗಳು ಗಮನ ಸೆಳೆದವು. ಈ ಸಂದರ್ಭದಲ್ಲಿ ಅಂಬಾರಿ ಹೊತ್ತ ಅರ್ಜುನನ ರಂಗೋಲಿ ಕಲಾಕೃತಿ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳು ರಂಗೋಲಿ ಕಲಾಕೃತಿಯಲ್ಲಿ ಗಮನ ಸೆಳೆದವು.
ಮೈಸೂರು ದಸರಾ ಮಹೋತ್ಸವದ ನಿಮಿತ್ತ ಮಹಿಳಾ ಮತ್ತು ಮಕ್ಕಳ ಇಲಾಖೆ ಮತ್ತು ಮಹಿಳಾ ದಸರಾ ಉಪಸಮಿತಿ ವತಿಯಿಂದ ಅಂಬಾ ವಿಲಾಸ ಅರಮನೆ ಮುಂಭಾಗ ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳೆಯರು ತಮ್ಮದೇ ಆದ ವಿಭಿನ್ನ ಕಲ್ಪನೆಯಲ್ಲಿ ರಂಗೋಲಿಗಳನ್ನು ಬಿಡಿಸುವ ಮೂಲಕ ಅತ್ಯುತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಕ್ಕಳು ಮೊಬೈಲ್ ಗೀಳಿಗೆ ಪ್ರಭಾವಿತರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುತ್ತಾರೆ. ಹಾಗಾಗಿ ಅದರ ಪರಿಕಲ್ಪನೆಯಲ್ಲಿ ಡೋಂಟ್ ಬಿ ಅಡಿಕ್ಟೆಡ್ ಎಂಬ ಶೀರ್ಷಿಕೆಯಲ್ಲಿ ನಂಜನಗೂಡು ತಾಲೂಕಿನ ಶ್ವೇತಾ ಟಿ.ಡಿ ಅವರು ಬಿಡಿಸಿದ್ದರೆ, ಸರ್ಕಾರದ ಗೃಹ ಜ್ಯೋತಿ ಯೋಜನೆಯಿಂದ ಸಾಕಷ್ಟು ಮನೆಗಳಲ್ಲಿ ದೀಪ ಬೆಳಗಿದೆ ಎಂಬ ನಿಟ್ಟಿನಲ್ಲಿ ಮೈಸೂರಿನ ಸ್ಪಂದನ ಅವರು ಮಹಿಳೆ ಮತ್ತು ದೀಪದ ರಂಗೋಲಿಯನ್ನು ಚಿತ್ತಾಕರ್ಷಕವಾಗಿ ಬಿಡಿಸಿದ್ದರು.
ದಸರಾ ಅಂಗವಾಗಿ ಹುಲಿ ಮೇಲೆ ಕುಳಿತ ಚಾಮುಂಡೇಶ್ವರಿ ತಾಯಿಯನ್ನು ತುಮಕೂರಿನ ನಿರ್ಮಲಾ ಅವರು ಬಿಡಿಸುವ ಮೂಲಕ ಸ್ಪರ್ಧೆಗೆ ಜೀವ ತುಂಬಿಸಿದ್ದರು. ದುರ್ಗಾ ದೇವಿ ಮತ್ತು ದೇವಿಗೆ ಕಾವಲಾಗಿರುವ ಆನೆಯ ಚಿತ್ರವನ್ನು ಸಿಂಧೂ ಲಕ್ದ್ಮಿ ಅವರು ಬಿಡಿಸಿದ್ದರೆ, ಹೆಣ್ಣಾಗಿ ಹುಟ್ಟಿರುವುದಕ್ಕೆ ನಾವೆಲ್ಲಾ ಹೆಮ್ಮೆ ಪಡೋಣ ಎಂಬ ಪರಿಕಲ್ಪನೆಯಲ್ಲಿ ದಾವಣಗೆರೆಯ ಲಕ್ಷ್ಮಿ ಅವರು ಚಿತ್ತಾಕರ್ಷಕವಾಗಿ ಬಿಡಿಸಿದ್ದರು. ನಂದಿ ಮತ್ತು ಶಿವಲಿಂಗವನ್ನು ವಿಜಯನಗರದ ಸುನಿತಾ ಅವರು ಬಿಡಿಸಿದ್ದರು.
ಕುರುಬರಹಳ್ಳಿಯ ಕಲಾವಿದ ಪುನೀತ್ ಅವರು ಅರ್ಜುನನ ನೆನಪಿನಲ್ಲಿ ಮೂಡಿಸಿದ್ದ ಅರ್ಜುನ ಆನೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಶಾಸಕ ಶ್ರೀ ವತ್ಸ ಅವರು ರಂಗೋಲಿ ಸ್ಪರ್ಧೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಹಿಳಾ ದಸರಾ ಉಪ ಸಮಿತಿಯಿಂದ ಆಯೋಜಿಸಲಾಗಿರುವ ರಂಗೋಲಿ ಸ್ಪರ್ಧೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಸುಮಾರು 150ಕ್ಕೂ ಹೆಚ್ಚು ಮಹಿಳೆಯರು ಆಸಕ್ತಿಯಿಂದ ಪಾಲ್ಗೊಂಡಿದ್ದಾರೆ. ದಸರಾ ಮಹೋತ್ಸವದ ನಿಮಿತ್ತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಈ ರಂಗೋಲಿ ಸ್ಪರ್ಧೆಯಿಂದ ನಾಡಹಬ್ಬ ದಸರಾಗೆ ಮತ್ತಷ್ಟು ಕಳೆಕಟ್ಟಿದೆ ಎಂದು ತಿಳಿಸಿದರು.