
Ashwaveega News 24×7 ಅಕ್ಟೋಬರ್. 13: ಅತ್ತೆ ಮಾವಂದಿರ ಕಿರುಕುಳಕ್ಕೆ ಬೇಸತ್ತು ನವವಿವಾಹಿತೆ ಒಬ್ಬರು ಕ್ರಿಮಿನಾಶಕ ಮಾತ್ರೆ ಸೇವಿಸಿ ಜೀವ ಬಿಟ್ಟಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ರಾಮಲಿಂಗಾಪುರ ಗ್ರಾಮದಲ್ಲಿ ನಡೆದಿದೆ.
ರಾಮಲಿಂಗಾಪುರ ಗ್ರಾಮದ ಸಿರೀಶಾ (22) ಮೃತ ದುರ್ದೈವಿ. ಐದು ವರ್ಷದಿಂದ ಯುವತಿ ಹಾಗೂ ಅದೇ ಗ್ರಾಮದ ಶ್ರೀನಾಥ್ ಎನ್ನುವ ಯುವಕ ಇಬ್ಬರು ಪ್ರೀತಿಸಿ ಕಳೆದ ವರ್ಷ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಆದರೆ ಮದುವೆ ನಂತರ ನಡೆದಿದ್ದೇ ಬೇರೆ, ಹುಡುಗಿ ಇಷ್ಟ ಇಲ್ಲ, ಅವಳು ಬೇರೆ ಜಾತಿಯವಳು ಎಂದು ಯುವಕನ ಕಡೆಯ ಕುಟುಂಬಸ್ಥರು ಯುವತಿಗೆ ಕಿರುಕುಳ ನೀಡುತ್ತಿದ್ದರು.
ತಮ್ಮದೇ ಕುಟುಂಬದಲ್ಲಿ ಮಾವನ ಮಗಳ ಜೊತೆ ಯುವಕನ ಮದುವೆ ಮಾಡಬೇಕು ಎಂದು ಆತನ ಪೋಷಕರು ಅಂದುಕೊಂಡಿದ್ದರು. ಆದರೆ ಇದರ ಮಧ್ಯೆ ಈ ಇಬ್ಬರು ಪ್ರೀತಿಸಿ ಮದುವೆಯಾದ ಮೇಲೆ ಎಲ್ಲವೂ ಕೆಟ್ಟು ಹೋಗಿತ್ತು. ಮದುವೆ ನಂತರ ವರದಕ್ಷಿಣೆ ಕಿರುಕುಳ ಆರೋಪ ಮಾಡಿ ಯುವತಿ ಕಡೆಯವರು ದೂರು ನೀಡಿದ್ದರು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಸದ್ಯ ಈ ಸಂಬಂಧ ಯುವತಿಯ ಕಡೆಯವರು ದೂರ ನೀಡಿದರೂ ಕ್ರಮ ಕೈಗೊಳ್ಳದ ಹಿನ್ನೆಲೆ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮುಂದೆ ಮೃತದೇಹವಿಟ್ಟು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಆದರೆ ಪ್ರತಿಭಟನೆಗೆ ಪೊಲೀಸರು ಬಿಡುತ್ತಿಲ್ಲ. ಹೀಗಾಗಿ ಪೊಲೀಸರು ಹಾಗೂ ಕುಟುಂಬಸ್ಥರು ನಡುವೆ ಮಾತಿನ ಚಕಮಕಿ ನಡೆದಿದೆ