
ಕಳೆದ ಕೆಲವು ತಿಂಗಳುಗಳಿಂದ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳ ಹೆಸರಿನಲ್ಲಿ ತಮ್ಮಲ್ಲಿ ಹಣ ಪಡೆದ ಸಾಲಗಾರರಿಗೆ ನೀಡುತ್ತಿರುವ ಕಿರುಕುಳವನ್ನು ತಪ್ಪಿಸಲು ಮತ್ತು ಮೈಕ್ರೋಫೈನಾನ್ಸ್ ಸಂಸ್ಥೆಗಳ ಈ ರೀತಿ ಬೇಕಾಬಿಟ್ಟಿ ವಸೂಲಿ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಿ ಅವುಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ರೂಪಿಸಿದ್ದ ಮೈಕ್ರೋಫೈನಾನ್ಸ್ ನಿಯಂತ್ರಣ ಸುಗ್ರಿವಾಜ್ಞೆಗೆ ರಾಜ್ಯಪಾಲರು ಜನವರಿ 12 ರಂದು ಕೊನೆಗೂ ಅಂಕಿತ ಹಾಕಿದ್ದಾರೆ.
ಅಷ್ಟೇ ಅಲ್ಲ, ಸುಗ್ರೀವಾಜ್ಞೆಯಲ್ಲಿ ಕೆಲವೊಂದು ಕೊರತೆಯಿದ್ದು ಆ ಅಂಶಗಳ ಬಗ್ಗೆ ಸಲಹೆಗಳನ್ನು ನೀಡಿರುವ ರಾಜ್ಯಪಾಲರು, ವಿಧಾನ ಮಂಡಲ ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚಿಸಬೇಕು . ಮತ್ತು ಕೆಲವು ಅಂಶಗಳನ್ನು ಅದಕ್ಕೆ ಸೇರಿಸಬೇಕು ಎಂದು ಸೂಚಿಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಮೈಕ್ರೋ ಫೈನಾನ್ಸ್ನವರು ನೀಡುತ್ತಿದ್ದ ಕಿರುಕುಳಕ್ಕೆ ಅಂಕುಶ ಹಾಕಲು ಸರ್ಕಾರ ಸುಗ್ರೀವಾಜ್ಞೆ ಮೊರೆ ಹೋಗಿತ್ತು. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಈ ಬಗ್ಗೆ ಕಠಿಣ ಕಾನೂನು ರೂಪಿಸಿ ಅದನ್ನು ಅಂಕಿತಕ್ಕಾಗಿ ರಾಜ್ಯಪಾಲರಿಗೆ ರವಾನಿಸಲಾಗಿತ್ತು.

ಆದರೆ, ಬಜೆಟ್ ಅಧಿವೇಶನದಲ್ಲಿ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಸಾಧಕ-ಬಾಧಕಗಳ ಬಗ್ಗೆ ಸಮಗ್ರ ಚರ್ಚೆ ನಡೆಸುವಂತೆ ತಿಳಿಸಿದ್ದ ರಾಜ್ಯಪಾಲರು, ಮೈಕ್ರೋ ಫೈನಾನ್ಸ್ನವರ ದೌರ್ಜನ್ಯ, ಕಿರುಕುಳಗಳನ್ನು ಮಟ್ಟಹಾಕಲು ಈಗಿರುವ ಕಾನೂನುಗಳಲ್ಲೇ ಸಾಕಷ್ಟು ಅವಕಾಶಗಳಿವೆ. ಆದರೆ, ಪೊಲೀಸರು ಸರಿಯಾದ ಕ್ರಮಕೈಗೊಳ್ಳುತ್ತಿಲ್ಲ ಎಂದು ಪೊಲೀಸ್ ವ್ಯವಸ್ಥೆ ಬಗ್ಗೆಯೂ ತೀವ್ರ ಅಸಮಾಧನ ಹೊರಹಾಕಿದ್ದರು. ಮೈಕ್ರೋ ಫೈನಾನ್ಸ್ ವಿರುದ್ಧ ಮತ್ತೊಂದು ಕಾನೂನಿನ ಅಗತ್ಯತೆ ಕಾಣುತ್ತಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಖಡಕ್ ಸಂದೇಶ ರವಾನಿಸಿ ಸುಗ್ರೀವಾಜ್ಞೆಯನ್ನು ಹಿಂದಿರುಗಿಸಿದ್ದರು. ನಂತರ ಸರ್ಕಾರವು ಪುನಃ ರಾಜ್ಯಪಾಲರಿಗೆ ಸುಗ್ರೀವಾಜ್ಞೆಯನ್ನು ಕಳುಹಿಸಿ ಅದರಿಂದ ಆಗುತ್ತಿರುವ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡುವ ಪ್ರಯತ್ನಗಳನ್ನು ಮಾಡಿತ್ತು. ಕೊನೆಗೂ ರಾಜ್ಯಪಾಲರು ಅಂಕಿತ ಹಾಕಿ ಕಳುಹಿಸಿದ್ದಾರೆ. ಸುಗ್ರೀವಾಜ್ಞೆಯ ಉದ್ದೇಶ ಅತ್ಯುತ್ತಮವಾಗಿದೆಯಾದರೂ ಕಾನೂನಿನ ದೃಷ್ಟಿಯಿಂದ ಮತ್ತು ಅದು ಬೀರಬುದಾದ ಪರಿಣಾಮಗಳ ಕುರಿತಂತೆ ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚಿಸುವ ಅಗತ್ಯವಿದೆ ಎಂಬುದು ಸೇರಿದಂತೆ, ಈ ಕೆಳಕಂಡ ಕೆಲವು ಸಲಹೆ ಸೂಚನೆಗಳೊಂದಿಗೆ ಸುಗ್ರೀವಾಜ್ಞೆಗೆ ಅಧಿಕೃತ ಮುದ್ರೆಯನ್ನು ಒತ್ತಿದ್ದಾರೆ.
ಮೊದಲನೆಯದಾಗಿ, ಸುಗ್ರೀವಾಜ್ಞೆಯನ್ನು ತಪ್ಪು ಗ್ರಹಿಕೆ ಅಥವಾ ದುರ್ಬಳಕೆ ಮಾಡಿಕೊಂಡು ಆರ್ಬಿಐ ನೋಂದಾಯಿತ ಮತ್ತು ನಿಯಂತ್ರಿತ ಹಣಕಾಸು ಸಂಸ್ಥೆಗಳಿಗೆ ಕಿರುಕುಳ ನೀಡಬಾರದು. ಎರಡನೆಯದಾಗಿ, ಕಾನೂನುಬದ್ಧ ಮತ್ತು ನಿಜವಾದ ಸಾಲದಾತರು ಬಡ್ಡಿ ಮತ್ತು ಅಸಲು ವಸೂಲಿ ಮಾಡಲು ತೊಂದರೆ ಆಗಬಾರದು ಅಂತಹ ಸಾಲಗಾರರು ನೀಡಿದ್ದ ಸಾಲವನ್ನು ಮರಳಿ ಪಡೆಯಲು ಯಾವುದೇ ಪರಿಹಾರ ಸುಗ್ರೀವಾಜ್ಞೆಯಲ್ಲಿ ಇಲ್ಲ. ಇದು ಕಾನೂನು ಹೋರಾಟಕ್ಕೆ ಕಾರಣ ಆಗಬಾರದು. ಮೂರನೆಯದಾಗಿ, ಸಹಜ ನ್ಯಾಯದ ಭಾಗವಾಗಿ ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಹಕ್ಕು ಮತ್ತು ಕಾನೂನು ಪರಿಹಾರಕ್ಕೆ ಹೋರಾಟ ನಡೆಸುವ ಅವಕಾಶವಿದೆ. ಯಾರೇ ಆದರೂ ಹೋರಾಟ ಮಾಡದಂತೆ ತಡೆಯುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಕಾರಣ ಆಗಬಹುದು . ರಾಜ್ಯ ಸರ್ಕಾರ ಈ ಕುರಿತು ಮರುಚಿಂತನೆ ನಡೆಸಿ ಸೂಕ್ತಕ್ರಮ ಕೈಗೊಳ್ಳಬೇಕು. ಮತ್ತು ಕೊನೆಯದಾಗಿ, ಸುಗ್ರೀವಾಜ್ಞೆಯನ್ನು ಮಸೂದೆಯಾಗಿ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸುವ ಸಂದರ್ಭದಲ್ಲಿ ಈ ಮೇಲಿನ ಅಂಶಗಳನ್ನು ಸೇರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈ ಎಲ್ಲಾ ಅಂಶಗಳ ಬಗ್ಗೆ ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚೆ ನಡೆಸಬೇಕು. ಎಂದು ರಾಜ್ಯಪಾಲರು ಸರ್ಕಾರಕ್ಕೆ ತಿಳಿಸಿದ್ದಾರೆ.

ರಾಜ್ಯಪಾಲರು ಅಂಕಿತ ಹಾಕುತ್ತಿದ್ದಂತೆ ಸರ್ಕಾರ ಅದನ್ನು ಗೆಜೆಟ್ನಲ್ಲಿ ಪ್ರಕಟಿಸಿದ್ದು ಮೈಕ್ರೋ ಫೈನಾನ್ಸ್ ನಿಯಂತ್ರಣ ಸುಗ್ರೀವಾಜ್ಞೆ ತಕ್ಷಣದಿಂದಲೇ ಜಾರಿಗೆ ಬಂದಿದೆ.
ಮೈಕ್ರೋ ಫೈನಾನ್ಸ್ ನಿಯಂತ್ರಣ ಸುಗ್ರೀವಾಜ್ಞೆಗೆ ರಾಜ್ಯಪಾಲರ ಸಹಿ ಆಗಿ, ಅದು ಗೆಜೆಟ್ನಲ್ಲಿ ಸೇರ್ಪಡೆಯಾಗುತ್ತಿದ್ದಂತೆಯೇ ಸಂಬಂಧ ಪಟ್ಟ ಅಧಿಕಾರಿಗಳು, ಶಿವಮೊಗ್ಗ, ಗದಗ ಸೇರಿದಂತೆ ಹಲವೆಡೆ ಅನಧಿಕೃತ ಫೈನ್ಯಾನ್ಸ್ಗಳ ಮೇಲೆ ದಾಳಿ ನಡೆಸಿದ್ದು, ಭಾರೀ ಪ್ರಮಾಣದ ಹಣ, ಚೆಕ್ಕುಗಳು, ವಾಹನಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ವರದಿಗಳು ಬಂದಿವೆ.
ಇದರಿಂದ ಇದುವರೆಗೆ ಮೈಕ್ರೋ ಫೈನ್ಯಾನ್ಸ್ನವರ ಕಿರುಕುಳದಿಂದ ಸಂತ್ರಸ್ತರಾದವರಿಗೆ ಕೊಂಚಮಟ್ಟಿನ ನಿರಾಳ ಉಂಟಾಗಬಹುದಾಗಿದೆ. ಸರ್ಕಾರ ಇಲ್ಲಿಗೇ ಸುಮ್ಮನಾಗಿ ಕೈತೊಳೆದುಕೊಳ್ಳದೆ ಸಾಲಗಾರರ ಕಾಟದಿಂದ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ, ನೊಂದವರಿಗೆ ಸೂಕ್ತ ಪರಿಹಾರ ಒದಗಿಸುವ ಮತ್ತು ಅವರಿಗೆ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಬೇಕಾಗಿದೆ. ಇನ್ನೊಂದೆಡೆ ಪ್ರಾಮಾಣಿಕವಾಗಿ ಸಾಲ ನೀಡಿದವರಿಗೂ ಅನ್ಯಾಯವಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.
ರಾಜ್ಯಪಾಲರು ಸರ್ಕಾರಕ್ಕೆ ಸೂಚಿಸಿರುವ ಸಲಹೆಗಳನ್ನು ಗಮನಿಸಿದರೆ, ಸಾಲದಾತರು ಮತ್ತು ಸಾಲಗಾರರು ಇಬ್ಬರ ಹಿತರಕ್ಷಣೆಯನ್ನೂ ಪರಿಗಣಿಸಿರುವುದು ಸ್ಪಷ್ಟವಾಗಿದೆ. ಇಬ್ಬರ ನಡುವೆ ಸಮನ್ವಯತೆ ಸಾಧಿಸುವ ಅವರ ಕಳಕಳಿ ಅರ್ಥವಾಗುತ್ತದೆ. ಏಕೆಂದರೆ, ಸಾಮಾನ್ಯವಾಗಿ ಏಕಮುಖವಾಗಿ ಮಾಡುವ, ಜಾರಿಗೆ ತರುವ ಯಾವುದೇ ಕಾನೂನುಗಳು ದುರುಪಯೋಗವಾಗುವುದನ್ನು ನೋಡುತ್ತಲೇ ಇದ್ದೇವೆ. ಸಾಲಗಾರರ ಹಿತಾಸಕ್ತಿಯನ್ನಷ್ಟೇ ನಾವು ಪರಿಗಣಿಸಿದರೆ ಸಾಕೇ… ಸಾಲ ನೀಡುವ ಕಿರುಸಾಲ ನೀಡಿಕೆಯ ಸಂಸ್ಥೆಗಳೂ ಕೂಡ ತಮ್ಮ ಹಣವನ್ನು ಒಂದು ನಿಗದಿತ ಬಡ್ಡಿಯ ಆಧಾರದಲ್ಲಿ ಸಾಲ ಕೊಡುತ್ತವೆ. ಅವರು ವಿಧಿಸುವ ಬಡ್ಡಿ ಆರ್ಬಿಐ ನಿಯಮಾವಳಿಗಳಿಗೆ ಅನುಗುಣವಾಗಿದ್ದರೆ, ಅವರ ಸಾಲ ವಸೂಲಿ ಕ್ರಮ ಕಾನೂನುಬದ್ಧವಾಗಿದ್ದರೆ ಅವರಿಗೆ ತೊಂದರೆಯಾಗಬಾರದು. ಅವರು ವಸೂಲಿ ಸಮಯದಲ್ಲಿ ಉದ್ಧಟತನದಿಂದ ವರ್ತಿಸಿದರೆ ಮಾತ್ರ ಕ್ರಮ ನ್ಯಾಯವೇ. ಆದರೆ ಕಾಯ್ದೆ ಪ್ರಕಾರ ಹಣದ ವಹಿವಾಟು ನಡೆಸುವವರಿಗೆ ಈ ಸುಗ್ರೀವಾಜ್ಞೆ ಮಾರಕವಾಗಬಾರದೆಂಬುದೇ ರಾಜ್ಯಪಾಲರ ಉದ್ದೇಶ. ಅವರ ಈ ನಡೆ ಸಕಾಲಿಕವಾಗಿದೆ.