
woman brutally murder and throw her in a garbage truck
ಮಹಿಳೆಯೊಬ್ಬರನ್ನು ಭೀಕರವಾಗಿ ಕೊಂದು ಮೂಟೆಕಟ್ಟೆ ಬಿಬಿಎಂಪಿ ಕಸದ ಲಾರಿಗೆ ಎಸೆದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಬೆಂಗಳೂರಿನ ಚೆನ್ನಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಸ್ಕೇಟಿಂಗ್ ಮೈದಾನದ ಬಳಿ ನಿಲ್ಲಿಸಿದ್ದ ಕಸದ ಲಾರಿಯಲ್ಲಿ ಇಂದು ಬೆಳಗ್ಗೆ ಮೂಟೆಯೊಂದು ಕಂಡು ಬಂದಿದ್ದು, ಪೌರಕಾರ್ಮಿಕರು ರಕ್ತದ ಕಲೆ ನೋಡಿ ಪರಿಶೀಲಿಸಿದಾಗ ಅದರೊಳಗೆ ಮಹಿಳೆ ಶವ ಪತ್ತೆಯಾಗಿದೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪರಿಶೀಲನೆ ನಡೆಸಿದಾಗ ಸುಮಾರು 30-35 ವರ್ಷದ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಕೈಕಾಲುಗಳನ್ನು ಕಟ್ಟಿ ಪ್ಲಾಸ್ಟಿಕ್ ಚೀಲದಲ್ಲಿ ಶವವನ್ನು ಹಾಕಿ ಇಲ್ಲಿ ಎಸೆಯಲಾಗಿದೆ ಎಂದು ಗೊತ್ತಾಗಿದೆ.
ಆಟೋದಲ್ಲಿ ಬಂದಿರುವ ದುಷ್ಕರ್ಮಿಗಳು ಶವವನ್ನು ಕಸದ ಲಾರಿಗೆ ಎಸೆದಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಪತ್ತೆಯಾಗಿದ್ದು, ಹಂತಕರ ಪತ್ತೆಗೆ ಈಗ ಪೊಲೀಸರು ಬಲೆಬೀಸಿದ್ದಾರೆ. ಈ ಘಟನೆ ಸ್ಥಳೀಯರನ್ನು ದಂಗುಬಡಿಸಿದ್ದು, ಈ ಪ್ರದೇಶದಲ್ಲಿ ರಾತ್ರಿ ವೇಳೆ ಜನರ ಓಡಾಟ ಕಡಿಮೆ ಇರುವುದನ್ನು ಎಣಿಸಿ ಹಂತಕರು ಕಸದ ಲಾರಿಗೆ ಶವ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹದಲ್ಲಿ ಯಾವುದೇ ಗುರುತರ ಗಾಯದ ಗುರುತುಗಳಿಲ್ಲ. ಬೇರೆಲ್ಲೋ ಕೊಲೆ ಮಾಡಿ ಇಲ್ಲಿಗೆ ತಂದು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದರ ನಡುವೆ ಸ್ಥಳೀಯ ಸಿಸಿ ಟಿವಿಗಳನ್ನು ಕೂಡ ಪರಿಶೀಲನೆ ನಡೆಸಲಾಗುತ್ತಿದೆ. ಮೃತ ಮಹಿಳೆ ಯಾರು ಎಂಬುವುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಈ ಕೊಲೆ ರಹಸ್ಯವನ್ನು ಬಯಲಿಗೆಳೆಯಲು ವಿಶೇಷ ತಂಡವನ್ನು ರಚಿಸಲಾಗಿದೆ.