
ಬೆಂಗಳೂರು: ನಗರದಲ್ಲಿ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಗಂಭೀರವಾಗಲಿದ್ದು, ಚಿಕ್ಕಪೇಟೆ ಮತ್ತು ಕೆ.ಆರ್.ಮಾರ್ಕೆಟ್ ಭಾಗಗಳಲ್ಲಿ ಬಿಬಿಎಂಪಿ ಕಾಮಗಾರಿಗಳ ಹಿನ್ನೆಲೆ ಒಂದು ತಿಂಗಳ ಕಾಲ ವಾಹನ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.
ಬಿಬಿಎಂಪಿಯಿಂದ ಚಿಕ್ಕಪೇಟೆ ಮತ್ತು ಕೆ.ಆರ್.ಮಾರ್ಕೆಟ್ ಭಾಗದಲ್ಲಿ ರಸ್ತೆ ರಿಪೇರಿ ಹಾಗೂ ಹೊಸ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರಿ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಸಂಚಾರ ನಿರ್ಬಂಧ ಇರುವ ರಸ್ತೆಗಳಲ್ಲಿ:
- ಕಬ್ಬನ್ ಪೇಟೆ ಮುಖ್ಯ ರಸ್ತೆಯಲ್ಲಿ: ಅವೆನ್ಯೂ ರಸ್ತೆಯಿಂದ ಸಿದ್ದಣ್ಣಗಲ್ಲಿಯವರೆಗೆ
- ಬನ್ನಪ್ಪಪಾರ್ಕ್ ರಸ್ತೆಯಲ್ಲಿ: ಅವೆನ್ಯೂ ರಸ್ತೆಯಿಂದ 15ನೇ ಕ್ರಾಸ್ ವರೆಗೆ
- ವಿಲ್ ರಸ್ತೆಯಲ್ಲಿ: ಡಾ. ಟಿಸಿಎಂ ರಾಯನ್ ರಸ್ತೆ ಜಂಕ್ಷನ್ನಿಂದ ಅಕ್ಕಿಪೇಟೆ ಮುಖ್ಯರಸ್ತೆವರೆಗೆ
- ಆರ್.ಟಿ. ಸ್ಟ್ರೀಟ್ ನಲ್ಲಿ: ಬಿವಿಕೆ ಐಯ್ಯಂಗಾರ್ ರಸ್ತೆಯಿಂದ ಅವೆನ್ಯೂ ರಸ್ತೆಯವರೆಗೆ
- ಆರ್.ಟಿ. ಸ್ಟ್ರೀಟ್ನಲ್ಲಿ: ಬಿವಿಕೆ ಐಯ್ಯಂಗಾರ್ ರಸ್ತೆಯಿಂದ ಬಳೆಪೇಟೆ ಮುಖ್ಯರಸ್ತೆಯವರೆಗೆ
- ಸಿಟಿ ಸ್ಟ್ರೀಟ್ನಲ್ಲಿ: ದೇವರದಾಸಿಮಯ್ಯ ರಸ್ತೆಯಿಂದ ನಾಗರ್ತ ಪೇಟೆ ಮುಖ್ಯರಸ್ತೆಯವರೆಗೆ
ಪರ್ಯಾಯ ಮಾರ್ಗಗಳು:
- ಹಲಸೂರು ಗೇಟ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ, ಕಬ್ಬನ್ ಪೇಟೆ ಮುಖ್ಯ ರಸ್ತೆಯಲ್ಲಿ ಕಾಮಗಾರಿ ಇರುವುದರಿಂದ, ಬನ್ನಪ್ಪ ರಸ್ತೆ ಮತ್ತು ಕೆ.ಜಿ. ರಸ್ತೆಗಳನ್ನು ಬಳಸಬಹುದು.
- ಹಲಸೂರುಗೇಟ್ ಪೊಲೀಸ್ ಠಾಣೆ ಜಂಕ್ಷನ್ನಿಂದ ಅವೆನ್ಯೂ ರಸ್ತೆ ಕಡೆಗೆ ಹೋಗುವ ವಾಹನಗಳು, ಕೆ.ಜಿ. ರಸ್ತೆಯ ಮುಖಾಂತರ ಅವೆನ್ಯೂ ರಸ್ತೆ ತಲುಪಬಹುದು.
- ಬನ್ನಪ್ಪ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ, ಕಬ್ಬನ್ಪೇಟೆ ಮುಖ್ಯ ರಸ್ತೆ ಬಳಸಿ ಸಂಚರಿಸಬಹುದು.
- ಸಿ.ಟಿ.ಮಾರ್ಕೆಟ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ, ಆರ್.ಟಿ. ಸ್ಟ್ರೀಟ್ನಲ್ಲಿ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ, ಬಿವಿಕೆ ಅಯ್ಯಂಗಾರ್ ರಸ್ತೆಯಿಂದ ಅವೆನ್ಯೂ ರಸ್ತೆಗೆ ಹೋಗುವ ವಾಹನಗಳು, ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಮುಂದುವರಿದು, ಮಾಮೂಲ್ ಪೇಟೆಗೆ (ಬೆಳ್ಳಿ ಬಸವಣ್ಣ ದೇವಸ್ಥಾನ ರಸ್ತೆ) ಎಡ ತಿರುವು ಪಡೆದು ಅವೆನ್ಯೂ ರಸ್ತೆ ತಲುಪಬಹುದು.