Ashwaveega News 24×7 ಮೇ 13:ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಸೂತಕದ ಛಾಯೆ ಆವರಿಸಿದೆ . ಹೌದು. . ಕನ್ನಡದ ಜನಪ್ರಿಯ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಬೆಳಗಿನ ಜಾವ ಏಕಾಏಕಿ ಹೃದಯಾಘಾತಕ್ಕೊಳಗಾದ ದಿಲೀಪ್ ರಾಜ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಬೆಂಗಳೂರು ಕುಮಾರಸ್ವಾಮಿ ಲೇಔಟ್ನ ಆಪೋಲ ಆಸ್ಪತ್ರೆಯಲ್ಲಿ ದಿಲೀಪ್ ರಾಜ್ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗ, ಕಿರುತೆರೆ ಲೋಕ ಹಾಗೂ ಅಭಿಮಾನಿಗಳಲ್ಲಿ ಶೋಕ ಆವರಿಸಿದೆ.
ಪತ್ನಿ ಶ್ರೀವಿದ್ಯಾ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿರುವ ದಿಲೀಪ್ ರಾಜ್ ಅವರ ಅಕಾಲಿಕ ಸಾವು ಕುಟುಂಬಕ್ಕೆ ಭಾರೀ ಆಘಾತ ತಂದಿದೆ. 2022ರಲ್ಲಿ ಹೊಸ ಮನೆಗೆ ಗೃಹ ಪ್ರವೇಶ ಮಾಡಿದ್ದ ದಿಲೀಪ್-ಶ್ರೀವಿದ್ಯಾ ದಂಪತಿ ಸಂತಸದ ಜೀವನ ನಡೆಸುತ್ತಿದ್ದರು. ಆದರೆ ಇದೀಗ ಆ ಕುಟುಂಬದಲ್ಲಿ ದುಃಖದ ನೆರಳು ಆವರಿಸಿದೆ.
2005ರಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯ
2005ರಿಂದಲೇ ಸಿನಿ ಪಯಣ ಆರಂಭಿಸಿದ್ದ ದಿಲೀಪ್ ರಾಜ್, ಬೆಳ್ಳಿ ತೆರೆ ಹಾಗೂ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. “ಬಾಯ್ ಫ್ರೆಂಡ್” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಅವರು, ನಂತರ “ಸುಗ್ರೀವ”, “ಗೆಳೆಯ”, “ಯೂ ಟರ್ನ್”, “ಪೊಲೀಸ್ ಕ್ವಾರ್ಟರ್ಸ್” ಸೇರಿದಂತೆ ಸುಮಾರು 28ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.
ಪುನೀತ್ ರಾಜ್ ಅಭಿನಯದ “ಮಿಲನ” ಸಿನಿಮಾದಲ್ಲಿ ನೆಗೆಟಿವ್ ಪಾತ್ರದ ಮೂಲಕ ಹೆಚ್ಚು ಗಮನ ಸೆಳೆದಿದ್ದರು. ನಿರ್ದೇಶಕ ಎ ಎಮ್ ಆರ್ ರಮೇಶ್ ನಿರ್ದೇಶನದ “ಪೊಲೀಸ್ ಕ್ವಾರ್ಟರ್ಸ್” ಸಿನಿಮಾದಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಇತ್ತೀಚೆಗೆ “ಲವ್ ಮಾಕ್ಟೇಲ್ 3” ಸಿನಿಮಾದಲ್ಲಿ ಅಭಿನಯಿಸಿದ್ದ ದಿಲೀಪ್ ರಾಜ್, ಕಿರುತೆರೆಯಲ್ಲೂ ಜನಪ್ರಿಯ ಮುಖವಾಗಿದ್ದರು. ʼಹಿಟ್ಲರ್ ಕಲ್ಯಾಣʼ ಧಾರಾವಾಹಿಯ ಮೂಲಕ ಮತ್ತೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಹತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿ ಮನೆಮಾತಾಗಿದ್ದರು.
ದಿಲೀಪ್ ರಾಜ್ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಕಲಾವಿದರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಬನಿ ಮಿಡಿಯುತ್ತಿದ್ದಾರೆ.
