
ಚಿಕ್ಕೋಡಿ: ಮಹಾರಾಷ್ಟ್ರ ಪಶ್ಚಿಮ ಘಟ್ಟ ಭಾಗದಲ್ಲಿ ಭಾರಿ ಮಳೆಯ ಹಿನ್ನೆಲೆ, ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣವಾಗಿದೆ. ದೂದಗಂಗಾ, ವೇದಗಂಗಾ, ಮತ್ತು ಕೃಷ್ಣಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಚಿಕ್ಕೋಡಿ ತಾಲೂಕಿನ ಕುಡಚಿ-ಉಗಾರ ಸೇತುವೆ ಜಲಾವೃತಗೊಂಡಿದೆ.
ಈ ಸೇತುವೆ ಮಿರಜ್ ಗೆ ಸಂಪರ್ಕ ಕಡಿತವಾಗಿದ್ದು, ಎರಡನೇ ಬಾರಿಗೆ ಮುಳುಗಡೆಯಾದ ಈ ಸೇತುವೆಯಿಂದಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ಸೇತುವೆ ಮುಳುಗಿದರೂ, ಅಧಿಕಾರಿಗಳು ಬ್ಯಾರಿಕೆಡ್ ಹಾಕಿ ಬಂದ್ ಮಾಡದಿರುವುದರಿಂದ ಜನರ ಓಡಾಟವೂ ಮುಂದುವರೆದಿದೆ.
ಮುಂಜಾಗ್ರತಾ ಕ್ರಮ ಕೈಗೊಳ್ಳದ ಪೊಲೀಸ್ ಹಾಗೂ ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ, ಮಾಂಜರಿ ಗ್ರಾಮದ ಬಳಿ ಸೇತುವೆಯ ಕೆಳಗೆ ಜನರು ಪ್ರಯಾಣಿಸುತ್ತಿದ್ದಾರೆ, ಇದು ಇನ್ನಷ್ಟು ಅಪಾಯಕ್ಕೆ ಕಾರಣವಾಗಿದೆ.