
ಚಾಮರಾಜನಗರ : ಬಿಆರ್ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಆನೆಗಳ ಸಾವಿನ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಸಾವುಗಳು ಅರಣ್ಯ ಇಲಾಖೆಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿಯೇ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಮೃತ ಪಟ್ಟ ಆನೆಗಳ ದೇಹಗಳು ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಲೆ ಬರುಡೆ ಹಾಗೂ ದಂತಗಳು ಮಾತ್ರ ಉಳಿದಿವೆ. ಯಳಂದೂರು ವಲಯದಲ್ಲಿ ಒಂದು ಆನೆ ಮತ್ತು ಬೈಲೂರು ವಲಯದಲ್ಲಿ ಮತ್ತೊಂದು ಆನೆಯ ಸಾವಿನ ಘಟನೆಗಳು ವರದಿಯಾಗಿವೆ.
ಅಂದಾಜು 8 ತಿಂಗಳ ಹಿಂದೆ ಬೈಲೂರು ರೇಂಜಿನಲ್ಲಿ ಮತ್ತು 2 ತಿಂಗಳ ಹಿಂದೆ ಯಳಂದೂರು ವಲಯದಲ್ಲಿ ಈ ಆನೆಗಳು ಸತ್ತಿರುವುದಾಗಿ ತಿಳಿದುಬಂದಿದೆ. ಇವುಗಳನ್ನು ಗಸ್ತಿನಲ್ಲಿರುವ ಅರಣ್ಯ ಸಿಬ್ಬಂದಿ ಗಮನದಲ್ಲಿಟ್ಟುಕೊಳ್ಳದಿರುವುದರಿಂದ, ಪರಿಸರ ವಾದಿಗಳು ಅರಣ್ಯ ಇಲಾಖೆಯ ನಿರ್ಲಕ್ಷ್ಯವನ್ನು ತೀವ್ರವಾಗಿ ಟೀಕಿಸಿದ್ದಾರೆ.
