
ಅಯೋಧ್ಯೆ ಹೆಸರು ಕೇಳಿದಾಗ ಮೊದಲು ನೆನಪಾಗುವುದು ರಘುಕುಲ ತಿಲಕ, ದಶರಥ ನಂದನ, ಮರ್ಯಾದಾ ಪುರುಷೋತ್ತಮ ಪ್ರಭು ರಾಮಚಂದ್ರನ ಜನ್ಮಸ್ಥಳ. ಕಳೆದ ಒಂದು ವರ್ಷದಿಂದ ಅಯೋಧ್ಯೆ ದೇಶದ ಗಮನ ಸೆಳೆಯುತ್ತಿದೆ. ಸಾಂಸ್ಕೃತಿಕ, ಆಧ್ಯಾತ್ಮಿಕತೆಯ ರಾಜಧಾನಿಯಂತಿರುವ ಉತ್ತರ ಪ್ರದೇಶದಲ್ಲಿ ಇದೀಗ ಅಯೋಧ್ಯೆಯೇ ದೇಶದ ಗಮನ ಸೆಳೆಯುತ್ತಿರುವುದು. ಅದಕ್ಕೆಲ್ಲ ಕಾರಣ ರಾಮಲಲ್ಲಾನ ಭವ್ಯ ಮಂದಿರ. ಭವ್ಯ ಮಂದಿರ ಆರಂಭವಾಗಿ ಇದೀಗ ಒಂದು ವರ್ಷ ತುಂಬಿದೆ ಉದ್ಘಾಟನೆಗೊಂಡ ವರ್ಷದೊಳಗೇ ಅಯೋಧ್ಯೆ ರಾಮಮಂದಿರ ದೇಶದ ನಂ.1 ಪ್ರವಾಸಿ ತಾಣ ಅಥವಾ ಭಕ್ತಾದಿಗಳ ನೆಚ್ಚಿನ ಭೇಟಿಯ ತಾಣವಾಗಿ ಹೊರಹೊಮ್ಮಿದೆ. 2024ರ ಜನವರಿ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಉತ್ತರ ಪ್ರದೇಶಕ್ಕೆ ಸುಮಾರು 47 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದರು. ಈ ಪೈಕಿ ಅಯೋಧ್ಯೆ ಒಂದಕ್ಕೇ 13.3 ಕೋಟಿ ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ. ಅದರಲ್ಲಿ 3,153 ವಿದೇಶಿಗರೂ ಕೂಡ ಸೇರಿದ್ದಾರೆ. ಮಂದಿರದಿಂದ ರಾಜ್ಯದ ಪ್ರವಾಸೋದ್ಯಮದ ನಕಾಶೆಯನ್ನೇ ಬದಲಿಸಿದೆ. ಹಬ್ಬಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ದಂಡೇ ಹರಿದು ಬರುತ್ತದೆ. ದೀಪಾವಳಿ ಸಂದರ್ಭದಲ್ಲಿ ಸರಯೂ ನದಿಯ ದಂಡೆಯ ಮೇಲೆ 22 ಲಕ್ಷ ಹಣತೆಗಳನ್ನು ಸರ್ಕಾರ ಬೆಳಗಿಸುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿತು.

ರಾಮಮಂದಿರ ಸುರಕ್ಷತೆ ನಿರ್ವಹಣೆಗೆ ವಿಶ್ವದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪ್ರತಿಷ್ಠಿತ ‘ಸ್ವರ್ಡ್ ಆಫ್ ಆನರ್’ ಪ್ರಶಸ್ತಿಯನ್ನು ರಾಮಮಂದಿರ ಪಡೆದುಕೊಂಡಿದೆ. ರಾಮಮಂದಿರ ಉದ್ಘಾಟನೆ ಬಳಿಕ ಕೇವಲ ಮಂದಿರದ ಚಿತ್ರಣ ಮಾತ್ರ ಬದಲಾಗಿಲ್ಲ. ಬದಲಾಗಿ ಸುತ್ತ ಮುತ್ತಲಿನ ಊರಿಗೂ ಹೊಸ ಕಳೆ ಬಂದಿದೆ. ಇಡೀ ಅಯೋಧ್ಯೆ ನಗರಿಗೆ ಹೊಸ ರೂಪವನ್ನು ನೀಡಲಾಗಿದೆ. ಸರಯೂ ನದಿಯಿಂದ ರಾಮ ಮಂದಿರ ಸಂಪರ್ಕಿಸಲು 13 ಕಿ.ಮೀನಷ್ಟು ಉದ್ದ ರಾಮಪಥ ನಿರ್ಮಾಣವಾಗಿದೆ. ಹೊಸ ರೂಪ ನೀಡಲಾಗಿದೆ. ಇದಕ್ಕಾಗಿ 50 ಸಾವಿರ ಕೋಟಿ ರು. ವೆಚ್ಚ ಮಾಡಲಾಗಿತ್ತು. ಅಯೋಧ್ಯೆಯಲ್ಲಿ ಸುಸಜ್ಜಿತ ರೈಲು ನಿಲ್ದಾಣ, ಅತ್ಯಾಧುನಿಕ ವಿಮಾನ ನಿಲ್ದಾಣ, ಅಗಲವಾದ ರಸ್ತೆಗಳನ್ನು ನಿರ್ಮಿಸಲಾಗಿದೆ. ಒಟ್ಟಿನಲ್ಲಿ ಅಯೋಧ್ಯೆಯೇ ಹೊಸತನದಿಂದ ಕಂಗೊಳಿಸುತ್ತಿದೆ. ಅಯೋಧ್ಯೆ ರಾಮಮಂದಿರದ ಮುಖ್ಯ ವಿಗ್ರಹವನ್ನು ಕೆತ್ತಿದ್ದು ಮೈಸೂರಿನ ಅರುಣ್ ಯೋಗಿರಾಜ್. ವಿಗ್ರಹ ಕೆತ್ತುವಿಕೆಗೆ ಮೂರು ಜನರನ್ನು ಆಯ್ಕೆ ಮಾಡಲಾಗಿತ್ತು. ಈ ಪೈಕಿ ಕನ್ನಡಿಗರಾದ ಅರುಣ್ ಯೋಗಿರಾಜ್, ಉತ್ತರ ಕನ್ನಡದ ಹೊನ್ನಾವರದ ಇಡಗುಂಜಿಯ ಗಣೇಶ್ ಭಟ್ ಮತ್ತು ರಾಜಸ್ಥಾನದ ಇನ್ನೊಬ್ಬ ಶಿಲ್ಪಿ. ಈ ಪೈಕಿ ಅಂತಿಮವಾಗಿ ಅರುಣ್ ಕೆತ್ತಿದ ವಿಗ್ರಹ ಆಯ್ಕೆಯಾಗಿತ್ತು. ಇದು, 51 ಇಂಚುಗಳ ಎತ್ತರವನ್ನು ಹೊಂದಿದೆ. ಭಗವಾನ್ ಶ್ರೀರಾಮನು ಬಿಲ್ಲು ಮತ್ತು ಬಾಣವನ್ನು ಹಿಡಿದಿರುವ 5 ವರ್ಷದ ಮಗುವಿನ ರೂಪದಲ್ಲಿದೆ. 2023 ಜ.22ರಂದು ಭವ್ಯವಾದ ಮಂದಿರ ಉದ್ಘಾಟನೆಯಾಗಿತ್ತು. ಆದರೆ ಹಿಂದೂ ಪಂಚಾಂಗದ ಪ್ರಕಾರ ಈ ಸಂಭ್ರಮಕ್ಕೆ ಜ.11ರಂದು ವರ್ಷ ಪೂರ್ಣಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಜ.11ರಿಂದ 13ರವರೆಗೆ ಪ್ರತಿಷ್ಠಾ ವಾರ್ಷಿಕೋತ್ಸವ ಹಮ್ಮಿಕೊಳ್ಳಳಲಾಗಿದೆ. ಮೊದಲ ದಿನ ಬೆಳಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಾಲ ರಾಮನಿಗೆ ಅಭಿಷೇಕ ನೆರವೇರಿಸಲಿದ್ದಾರೆ. ಜತೆಗೆ, ಖ್ಯಾತ ಗಾಯಕರ ಭಕ್ತಿ ಗೀತೆಗಳೂ ಬಿಡುಗಡೆಗೊಳ್ಳಲಿವೆ. ದೇಶಾದ್ಯಂತವಿರುವ ಸಂತರು ಹಾಗೂ ಭಕ್ತರಿಗೆ ಟ್ರಸ್ಟ್ ಆಮಂತ್ರಣ ಕಳಿಸಿದೆ.