
ಕರ್ನಾಟಕದಲ್ಲಿ ಇತ್ತೀಚೆಗೆ ಒಂದು ರೀತಿಯ ಹೊಲಸಿನ ರಾಜಕೀಯ ಶುರುವಾಗಿದೆ. ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ . ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅಥವಾ ಬಿಜೆಪಿ ಅಧಿಕಾರ ಕಳೆದುಕೊಂಡು ವಿಪಕ್ಷ ಸ್ಥಾನದಲ್ಲಿ ಕುಳಿತುಕೊಂಡ ಮೇಲೆ ಇಂತಹ ಕೊಳಕಿನ ರಾಜಕಾರಣ ಆರಂಭವಾಗಿರುವುದು ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ. ಅಂದರೆ ಅವರು ವಿಶ್ಲೇಷಿಸುವ ರೀತಿಯನ್ನು ನೋಡಿದರೆ ಈ ದರಿದ್ರ ರಾಜಕಾರಣದಲ್ಲಿ ಎರಡೂ ಪಕ್ಷಗಳದ್ದೂ (ಜೆಡಿಎಸ್ ಬಿಜೆಪಿಯಲ್ಲಿ ಮುಳುಗಿರುವುದರಿಂದ ಅದರ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ಎನ್ನುತ್ತಾರೆ ವಿಶ್ಲೇಷಕರು) ಸಮಪಾಲಿನ ಕಿಡಿಗೇಡಿತನವಿದೆ ಎಂದು ಅರ್ಥ. ಇವರಿಗೆ ಅಧಿಕಾರದ ಮದ ಏರಿದ್ದರೆ, ಅವರಿಗೆ ಅಧಿಕಾರ ವಂಚಿತ ಉರಿ. ಹಾಗಾಗಿ ಇಬ್ಬರೂ ಸೇರಿಯೇ ಇಂತಹ ಹೇಸಿಗೆಯ ರಾಜಕೀಯದಾಟದಲ್ಲಿ ತೊಡಗಿಕೊಂಡಿರಬಹುದು ಎನ್ನಲಾಗುತ್ತಿದೆ.
ಭ್ರಷ್ಟಾಚಾರದ ಪ್ರಕರಣಗಳಾಯಿತು , ಸರ್ಕಾರಿ ಜಮೀನು ಒತ್ತುವರಿ ಪ್ರಕರಣಗಳಾಯಿತು, ಭೂಗಳ್ಳತನಗಳಾಯಿತು, ಬೇನಾಮಿ ಹೆಸರಲ್ಲಿ ನಿವೇಶನಗಳನ್ನು ನುಂಗಿದ್ದಾಯಿತು, ಶಾಸಕರ ಖರೀದಿ ಮಾರಾಟದಂತಹ ಅಸಹ್ಯ ಬೆಳವಣಿಗೆಗಳೂ ಆಯಿತು, ವೈದ್ಯಕೀಯ, ಇಂಜಿನಿಯರಿಂಗ್ ಸೀಟುಗಳನ್ನು ಬ್ಲಾಕ್ ಮಾಡುವುದು- ಮಾರಾಟ ಮಾಡುವುದು ಆಯಿತು… ಹೀಗೆ ಎಲ್ಲವನ್ನೂ ಮಾಡಿ ಮುಗಿಸಿ, ಇದೀಗ ಹೋಲ್ಸೇಲ್ ಹನಿಟ್ರ್ಯಾಪ್ ಅಂದರೆ
ಸಾರಾಸಗಟು ಮಧು ಕುಣಿಕೆ’ ಎಂಬ ವಿನೂತನ ದಂಧೆಯೊಂದನ್ನು ನಮ್ಮ ರಾಜಕಾರಣಿಗಳು ಕೈಗೊಂಡಿದ್ದಾರೆ ಎಂಬ ಮಾಹಿತಿ ಇದೆ. ಇಂತಹ ಒಂದು ಹೇಯ ಕೃತ್ಯವನ್ನು ಮಾಡಿಸುವ ಸೂತ್ರಧಾರ ಯಾರು ಮತ್ತು ಯಾಕಾಗಿ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಹೀಗೆ ಮಾಡುವ ಹಿಂದಿನ ಉದ್ದೇಶವಾದರೂ ಎಂಬುದನ್ನು ಪತ್ತೆ ಹಚ್ಚಬೇಕೆಂದರೆ ಮೊದಲು ಆ ಸೂತ್ರಧಾರ ವ್ಯಕ್ತಿಯನ್ನು ಗುರುತಿಸಬೇಕು. ಮೊದಲು ವ್ಯಕ್ತಿಯನ್ನು ಗುರುತಿಸುವ ಕೆಲಸವಾದರೆ ಅವರು ಯಾವ ಉದ್ದೇಶಕ್ಕಾಗಿ ಇಂತಹ ಕೃತ್ಯವೊಂದಕ್ಕೆ ಕೈ ಹಾಕಿದರು ಎಂಬುದನ್ನು ಊಹಿಸುವುದು ಸರಳವಾಗುತ್ತದೆ. ಅದೇನೇ ಇರಲಿಪ್ರಸ್ತುತ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳವರು ಕೂಡ ಈ ಬಗ್ಗೆ ದನಿ ಎತ್ತುತ್ತಿದ್ದಾರೆ. ಪ್ರಮುಖವಾಗಿ ಈ ಬಗ್ಗೆ ಮೊದಲು ಬಾಂಬ್ ಸ್ಫೋಟಿಸಿದ್ದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಅವತ್ತು ಯತ್ನಾಳ್ ಸಿಡಿಸಿದ ಆ ಬಾಂಬ್ ಭೂತಾಕಾರವಾಗಿ ಬೆಳೆದು ಇಡೀ ರಾಜ್ಯವನ್ನು ವ್ಯಾಪಿಸಿಕೊಂಡಿತು. ಬಿಜೆಪಿ ಮತ್ತು ಅದರ ಅಂಗಪಕ್ಷ ಜಾತ್ಯತೀತ ಜನತಾ ದಳ (ಜೆಡಿಎಸ್)ಗಳ ಮೈತ್ರಿ ಕೂಟದ ವಿಪಕ್ಷ ಇದನ್ನೇ ಒಂದು ಬ್ರಹ್ಮಾಸ್ತ್ರ ಮಾಡಿಕೊಂಡು ಸಿದ್ಧರಾಮಯ್ಯ ಸರ್ಕಾರದ ಮೇಲೆ ಮುಗಿಬಿದ್ದಿತು. ಆಡಳಿತ ಪಕ್ಷದಲ್ಲೂ ಇದು ಇದ್ದಕ್ಕಿದ್ದಂತೆ ಹುಯಿಲೆದ್ದಿತು. ಸಚಿವ ಕೆ.ಎನ್.ರಾಜಣ್ಣ ಅವರಂತೂ ತಮ್ಮ ವಿರುದ್ಧ ಹನಿ ಹನಿಟ್ರ್ಯಾಪ್ (ಮಧು ಕುಣಿಕೆ) ಬೀಸಲಾಗಿದೆ ಎಂದು ಅತ್ಯಂತ ಆಕ್ರೋಶ ಭರಿತರಾದರು.ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದ ವಿಪಕ್ಷ ಶಾಸಕರಿಗಾಗಲಿ ಆಡಳಿತ ಪಕ್ಷದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಣದ ಸಚಿವ-ಶಾಸಕರಿಗಾಗಲಿ ನಿರ್ದಿಷ್ಟವಾಗಿ ಇಂತಹವರೇ ಈ ಕೃತ್ಯ ನಡೆಸಿದ್ದಾರೆ ಎಂಬ ನಿಖರ ಮಾಹಿತಿ ದೊರೆತಿಲ್ಲವಾದರೂ ಅವರೆಲ್ಲರ ಬೆರಳುಗಳೂ ತೋರಿಸುತ್ತಿರುವುದು ಕಾಂಗ್ರೆಸ್ನ ಟ್ರಬಲ್ ಷೂಟರ್, ಹಾಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರತ್ತ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಗಾಗಲಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರಿಗಾಗಲಿ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮುಂತಾದವರಿಗಾಗಲಿ ಯಾರಿಗೂ ನೇರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಎದುರು ನಿಂತು
ನೀವೇ ಇದನ್ನೆಲ್ಲ ಮಾಡುತ್ತಿರುವುದು’ ಎಂದು ಹೇಳಲಾಗಲಿ, ಅಥವಾ ಯಾಕೆ ಹೀಗೆ ಮಾಡುತ್ತಿದ್ದೀರಿ' ಎಂದು ಕೇಳಲಾಗಲಿ ಸಾಧ್ಯವಾಗುತ್ತಿಲ್ಲ. ಆದರೆ
ಸದಾಶಿವನಗರದ ನಿವಾಸಿ’ ಎಂದು ಹೇಳುತ್ತಾ ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಓಡಾಡುತ್ತಿದ್ದಾರೆ. ಯಾರಿಗೂ ಯಾರನ್ನೂ ತುಡುಕುವ ಧೈರ್ಯವಿದ್ದಂತಿಲ್ಲ. ಹಾಗೆ ಮಾಡಲು ಮೊದಲು ಸಾಕ್ಷಿಗಳನ್ನು ಕಲೆ ಹಾಕಬೇಕು.
ಇತ್ತ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ದೂರು ಕೊಟ್ಟರೆ ತನಿಖೆ ನಡೆಸೋಣಎಂದು ಹೇಳುತ್ತಿದ್ದರೆ,ಅತ್ತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು,
ನಾವು ಯಾರನ್ನೂ ರಕ್ಷಿಸುವುದಿಲ್ಲ, ಈ ಕುರಿತು ಸಾಕ್ಷಿ-ಪುರಾವೆಗಳು ದೊರೆತರೆ ಅಂತಹವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಸಚಿವರಾದ ಕೆ. ರಾಜಣ್ಣ ಅವರು, ಗೃಹ ಸಚಿವರಿಗೆ ದೂರು ಕೊಡುತ್ತೇನೆ'ಎಂದಿದ್ದಾರೆ. ಅದಕ್ಕೆ ಗೃಹ ಸಚಿವರು ಕೂಡ,
ದೂರು ಕೊಟ್ಟರೆ ತನಿಖೆಗೆ ಆದೇಶ ನೀಡುತ್ತೇನೆ’ ಎಂದು ಹೇಳಿದ್ದಾರೆ. ಆದರೆ, ನಿಜಕ್ಕೂ ಸಚಿವ ರಾಜಣ್ಣ ಅವರು ದೂರು ಕೊಡುತ್ತಾರಾ… ಅಸಲಿಗೆ ತನಿಖೆಯಾಗುತ್ತಾ… ಒಂದು ವೇಳೆ ತನಿಖೆ ನಡೆದರೂ ಸತ್ಯ ಬೆಳಕಿಗೆ ಬರುತ್ತಾ… ತಪ್ಪಿತಸ್ಥರು ಯಾರೆಂಬುದು ಬಯಲಾಗುತ್ತಾ… ಅಪರಾಧಿಗಳಿಗೆ ಸೂಕ್ತ ಶಿಕ್ಷೆಯಾಗುತ್ತಾ… ಮುಂತಾದ ಪ್ರಶ್ನೆಗಳಿಗೆ ಉತ್ತರಕ್ಕಾಗಿ ಕಾಯಬೇಕು. ಸದ್ಯಕ್ಕೆ ಹುತ್ತ ಬಡಿಯುವ ಕೆಲಸ ಆಗುತ್ತಿದೆ. ಹುತ್ತ ಬಗೆದು ಹಾವು ಹಿಡಿಯುವ ಕೆಲಸ ಮಾಡಬೇಕು. ಅದು ಸರ್ಕಾರದ ಜವಾಬ್ದಾರಿ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ, ಸ್ವಾತಂತ್ರೋತ್ಸವ ನಂತರ ಭಾರತದಲ್ಲಿ ಕರ್ನಾಟಕ ರಾಜ್ಯದ ಸುದೀರ್ಘ ಇತಿಹಾಸದಲ್ಲಿ ಹಿಂದೆ ಎಂದಾದರೂ ಇಂತಹ ಅಸಹ್ಯಕರವೂ, ದುರದೃಷ್ಟಕರವೂ ಆದ ರಾಜಕಾರಣ ನಡೆದಿತ್ತೇ ಎಂಬುದನ್ನು ಜನತೆ ಯೋಚಿಸಬೇಕಾಗುತ್ತದೆ.
ಎಂತೆಂತಹ ಪುಣ್ಯಾತ್ಮರು ಮುಖ್ಯಮಂತ್ರಿಗಳಖಾದರು, ಎಂತೆಂತಹ ಮುತ್ಸದ್ದಿಗಳು ಸಚಿವರಾದರು,ಎಂತೆಂತಹ ಘಟಾನುಘಟಿಗಳು ವಿರೋಧ ಪಕ್ಷದ ಸಾಲಿನಲ್ಲಿ ಕುಳಿತರು, ಎಂತೆಂತಹ ಚಾಣಾಕ್ಷರು ಸಭಾಧ್ಯಕ್ಷ ಸ್ಥಾನವನ್ನಲಂಕರಿಸಿದರು… ಎಂಬುದನ್ನು ಒಮ್ಮೆ ನೆನೆದರೆ ರೋಮಾಂಚನವಾಗುತ್ತದೆ.
ಆಡಳಿತ ಪಕ್ಷ ವಿರೋಧ ಪಕ್ಷಗಳ ಸದಸ್ಯರಲ್ಲಿ ಸ್ನೇಹವಿರುತ್ತಿತ್ತು, ಪ್ರೀತಿ ಇರುತ್ತಿತ್ತು, ಸೌಹಾರ್ದತೆ ಇರುತ್ತಿತ್ತು, ಪರಸ್ಪರ ಗೌರವ ಇರುತ್ತಿತ್ತು. ಇಂದು ಎಲ್ಲವೂ ತದ್ವಿರುದ್ಧ. ಪರಸ್ಪರ ದ್ವೇಷ, ಶತ್ರುತ್ವ. ಆದರೆ ಭ್ರಷ್ಟಾಚಾರ ವಿಷಯದಲ್ಲಿ ಮಾತ್ರ ಒಳಗೊಳಗೇ ಹೊಂದಾಣಿಕೆ' ರಾಜಕಾರಣ. ಅದಕ್ಕೇ ಇದನ್ನು ಹೊಲಸು ರಾಜಕೀಯ, ದರಿದ್ರ ರಾಜಕೀಯ ಅಂತ ಸಜ್ಜನರು ಅಸಹ್ಯಪಟ್ಟುಕೊಳ್ಳುವುದು. ಹಿಂದೆ ಅವನ್ಯಾರೋ ಬ್ರಿಟಿನ್ನ ಸಂಸದನೊಬ್ಬ ಹೇಳುತ್ತಿದ್ದನಂತೆ;
ಭಾರತದ ರಸ್ತೆಗಳು ಮತ್ತು ರಾಜಕಾರಣಿಗಳು ಯಾವತ್ತೂ ಸುಧಾರಿಸುವುದಿಲ್ಲ…’ ಎಂದು. ಎಂಥಾ ಮುತ್ತಿನಂಥ ಮಾತು…! ಇಂದಿನ ರಾಜಕಾರಣ ನೋಡುತ್ತಿರೆ ಅಂದು ಅವರು ಹೇಳಿರುವ ಈ ಮಾತು ಅಂದಿಗಿಂತ ಇಂದಿಗೇ ಹೆಚ್ಚು ಪ್ರಸ್ತುತ ಎನ್ನಿಸುತ್ತದೆ ಎಲ್ಲಾ ವಿಷಯದಲ್ಲೂ-ಅಲ್ಲವೇ…?