
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಪ್ರವಾಸಲ್ಲಿದ್ದಾರೆ. ಈ ವೇಳೆ ಹೈಕಮಾಂಡ್ ಭೇಟಿಯಾಗಲಿರುವ ಉಭಯ ನಾಯಕರು, ರಾಜ್ಯದ ಹಲವು ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲಿದ್ದಾರೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ, ರಾಜ್ಯ ಕಾಂಗ್ರೆಸ್ʼನ ಬಣ ರಾಜಕೀಯ ಸಹಿತ ಹಲವು ವಿಚಾರಗಳು ಚರ್ಚೆಗೆ ಬರಲಿವೆ. ಈ ಎಲ್ಲ ಸಮಸ್ಯೆಗಳಿಗೆ, ಉಭಯ ನಾಯಕರ ದೆಹಲಿ ಭೇಟಿಯಿಂದ ಒಂದು ಪರಿಹಾರ ಸಿಗಬಲ್ಲದು ಎಂಬ ಆಶಾಕಿರಣ ರಾಜ್ಯ ಕಾಂಗ್ರಸ್ʼನಲ್ಲಿ ಮೂಡಿದೆ.!
ರಾಜ್ಯ ಕಾಂಗ್ರೆಸ್ʼನಲ್ಲಿ ಸಿಎಂ ಸಿದ್ಧರಾಮಯ್ಯ ಬಣ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಣ ಎನ್ನುವ ಎರಡು ವಿಭಾಗಗಳಿವೆ ಎನ್ನುವುದು ಈಗ ಗುಟ್ಟಾಗೇನೂ ಉಳಿದಿಲ್ಲ. ಈ ಎರಡೂ ಬಣಗಳ ನಾಯಕರು ತಮ್ಮ ತಮ್ಮ ಹಿಂಬಾಲಕರಿಗೆ ಸೂಕ್ತ ಸ್ಥಾನಮಾನ ಕೊಡಿಸಲು ಆಗಾಗ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಲಾಬಿ ಮಾಡುತ್ತಲೇ ಇರುತ್ತಾರೆ. ಸದ್ಯಕ್ಕೆ ಹನಿಟ್ರ್ಯಾಪ್ ಪ್ರಕರಣ ರಾಜ್ಯ ಕಾಂಗ್ರಸ್ʼನಲ್ಲಿ ಸದ್ದು ಮಾಡುತ್ತಿದೆ. ಯಾವುದೋ ಒಬ್ಬ ನಾಯಕನನ್ನು ಟಾರ್ಗೆಟ್ ಮಾಡುವುದಕ್ಕೋಸ್ಕರವೇ ಈ ಹನಿಟ್ರ್ಯಾಪ್ ಪ್ರಕರಣವನ್ನು ಬಯಲಿಗೆಳೆಯಲಾಯಿತು ಎಂಬ ಮಾತುಗಳೂ ಇವೆ. ಈಗ ಸಚಿವ ರಾಜಣ್ಣ ಸಹ ದೆಹಲಿಗೆ ತೆರಳಲಿದ್ದು, ಈ ಬಗ್ಗೆ ಹೈಕಮಾಂಡ್ʼಗೆ ದೂರು ಕೊಡಲಿದ್ದಾರೆ ಎಂಬ ಮಾತುಗಳು ಕೇಳಿಬರ್ತಿವೆ!

ಈ ಎಲ್ಲಾ ಬೆಳವಣಿಗೆಗಳು ರಾಜ್ಯ ಕಾಂಗ್ರೆಸ್ʼನಲ್ಲಿ ಪ್ರಾರಂಭವಾಗಿದ್ದು, ಡಿಕೆ ಶಿವಕುಮಾರ್ʼರ ಅಧಿಕಾರ ಹಂಚಿಕೆ ಸೂತ್ರದ ಹೇಳಿಕೆಯಿಂದ. ಕೆಲ ಸಮಯದ ಹಿಂದೆ ರಾಷ್ಟ್ರೀಯ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ, ಹೈಕಮಾಂಡ್ ಮಟ್ಟದಲ್ಲಿಅಧಿಕಾರ ಹಂಚಿಕೆಯ ಮಾತುಕತೆ ನಡೆದಿದೆ ಎಂಬರ್ಥದ ಹೇಳಿಕೆ ನೀಡಿದ್ದರು. ಯಾವಾಗ ಡಿಕೆ ಶಿವಕುಮಾರ್ ಬಾಯಲ್ಲಿ ಅಧಿಕಾರ ಹಂಚಿಕೆಯ ಮಾತು ಬಂತೋ, ರಾಜ್ಯ ಕಾಂಗ್ರೆಸ್ʼನಲ್ಲಿ ಬಣ ಬಡಿದಾಟ ಸ್ಫೋಟಗೊಂಡಿತ್ತು. ಸಿಎಂ ಸಿದ್ಧರಾಮಯ್ಯ ಆಪ್ತ ನಾಯಕರು, ಸಿದ್ಧರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಗಳಾಗಿರುತ್ತಾರೆ ಎಂದು, ಸಿದ್ಧರಾಮಯ್ಯ ಪರ ಬ್ಯಾಟ್ ಬೀಸಲು ಆರಂಭಿಸಿದ್ದರೆ, ಇನ್ನೂ ಕೆಲ ನಾಯಕರು ಡಿಕೆಶಿ ಪರವಾಗಿ ಬ್ಯಾಟ್ ಬೀಸತೊಡಗಿದ್ದರು. ಸಚಿವರಾದ ಸತೀಶ್ ಜಾರಕಿಹೊಳಿ, ರಾಜಣ್ಣ ಮುಂತಾದ ನಾಯಕರು, ಕೆಪಿಸಿಸಿ ಸ್ಥಾನದಿಂದ ಡಿಕೆ ಶಿವಕುಮಾರ್ʼರನ್ನು ಬದಲಿಸುಚವ ಪ್ರಯತ್ನವನ್ನೂ ಮಾಡಿದರು. ಯಾವಾಗ ತನ್ನ ವಿರುದ್ಧದ ಲಾಬಿ ಜೋರಾಗುತ್ತಿದೆ ಎಂದು ಡಿಕೆ ಶಿವಕುಮಾರ್ʼಗೆ ಅನ್ನಿಸ್ತೋ, ತಾವೂ ಸಹ ರಾಜಕೀಯ ಪಟ್ಟುಗಳನ್ನು ಹಾಕೋಕೆ ಮುಂದಾದ್ರು. ಕುಂಭಮೇಳಕ್ಕೆ ಭೇಟಿ ನೀಡಿದ್ದು, ತಾನೂ ಸಹ ಹಿಂದು ಎಂಬ ಹೇಳಿಕೆ ನೀಡಿದ್ದು, ಸದ್ಗುರು ಅವರ ಶಿವರಾತ್ರಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡಿದ್ದು, ಇವೆಲ್ಲವೂ ಪಕ್ಷದ ಹೈಕಮಾಂಡ್ʼಗೆ ಒಂದು ಸ್ಪಷ್ಟ ಸಂದೇಶ ನೀಡಿದ ಪ್ರಯತ್ನದಂತಿತ್ತು.
ಈ ಎಲ್ಲಾ ಬೆಳವಣಿಗೆಗಳ ಮುಂದುವರೆದ ಭಾಗದಂತೆ, ಇತ್ತೀಚೆಗೆ ಸಚಿವ ಸತೀಶ್ ಜಾರಕಿಹೊಳಿ 4 ದಿನಗಳ ದೆಹಲಿ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಪಕ್ಷದ ಹೈಕಮಾಂಡ್ ಜೊತೆ ಹಲವು ರಾಜಕೀಯ ವಿಚಾರ ಚರ್ಚಿಸಿದ್ದಾರೆ ಎನ್ನಲಾಗಿದೆ. ಸತೀಶ್ʼರ ದೆಹಲಿ ಭೇಟಿಯ ವೇಳೆ ಗಮನ ಸೆಳೆದಿದ್ದು, ಅವರು ಜೆಡಿಎಸ್ ವರಿಷ್ಠರಾದ HD ದೇವೇಗೌಡ ಅವರನ್ನು ಭೇಟಿ ಮಾಡಿದ್ದು. ಸಾಮಾನ್ಯವಾಗಿ ಬಹಿರಂಗವಾಗಿ ಯಾವುದೇ ಅನ್ಯ ಪಕ್ಷದ ನಾಯಕರನ್ನು ಭೇಟಿ ಮಾಡದ ಸಚಿವ ಸತೀಶ್ ಜಾರಕಿಹೊಳಿ, ದಿಢೀರ್ ಎಂದು HDD ಹಾಗೂ HDK ಭೇಟಿ ಮಾಡಿದ್ದು ಹಲವು ಊಹಾಪೋಹಗಳಿಗೂ ಕಾರಣವಾಗಿತ್ತು. ಸತೀಶ್ʼರ ಈ ಭೇಟಯನ್ನು ವಿವಿಧ ರೀತಿಯಲ್ಲಿ ಅರ್ಥೈಸುವ ಕೆಲಸಗಳೂ ನಡೆದವು. ಆದರೆ ರಾಜಕೀಯ ತಜ್ನರ ಪ್ರಕಾರ, ಒಂದು ವೇಳೆ ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಅಥವಾ ಸಿಎಂ ಸ್ಥಾನ ಬದಲಾವಣೆ ಮಾಡೋದಾದ್ರೆ, ತಾನೂ ಅದರ ಆಕಾಂಕ್ಷಿ ಎಂದು ಸ್ಪಷ್ಟಪಡಿಸೋದು ಹಾಗೂ ಅದಕ್ಕೆ ಶಾಸಕರ ಬೆಂಬಲ ಗಳಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು ಎನ್ನಲಾಗಿದೆ. ಅದರ ಜೊತೆಗೆ ಒಂದು ಸಂದೇಶ ರವಾನೆ ಮಾಡುವ ಉದ್ದೇಶವೂ ಈ ಭೇಟಿಯ ಹಿಂದಿತ್ತು ಎನ್ನಲಾಗಿದೆ.
ಈಗ ದೆಹಲಿ ಭೇಟಿಯಲ್ಲಿರುವ ಸಿದ್ಧರಾಮಯ್ಯ ತಮ್ಮದೇ ಆದ ರಾಜಕೀಯ ಪಟ್ಟುಗಳನ್ನು ಇಡುತ್ತಿದ್ದಾರೆ. ತಮ್ಮ ಸಿಎಂ ಸ್ಥಾನ ಭದ್ರಪಡಿಸಿಕೊಳ್ಳೋದು, ಜೊತೆಗೆ ಒಂದೊಮ್ಮೆ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡಲು ಮುಂದಾದ್ರೆ, ಅದಕ್ಕೆ ತಮ್ಮ ಆಪ್ತ ವಲಯದಲ್ಲಿರುವವರೇ ನೇಮಕವಾಗುವಂತೆ ನೋಡಿಕೊಳ್ಳೋದು ಸಿದ್ಧರಾಮಯ್ಯ ಉದ್ದೇಶ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮೂರು ಹೆಸರುಗಳನ್ನ ಸಿಎಂ ಹೈಕಮಾಂಡ್ ಮುಂದೆ ಇಡಲಿದ್ದಾರೆ ಎನ್ನಲಾಗ್ತಿದೆ. ಓಮದು ವೇಳೆ ದಲಿತ ಕೋಟಾದಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡೋದಾದ್ರೆ, ಮಹದೇವಪ್ಪಗೆ ಸ್ಥಾನ ನೀಡಿ. ವಾಲ್ಮೀಕಿ ಕೋಟಾದಲ್ಲಿ ನೇಮಕ ಮಾಡೋದಿದ್ರೆ, ಸತೀಶ್ ಜಾರಕಿಹೊಳಿಗೆ ನೀಡಿ. ಇವೆರಡೂ ಕೋಟಾಗಳನ್ನೂ ಹೊರತುಪಡಿಸಿ, ಲಿಂಗಾಯತ ಕೋಟಾದಲ್ಲಿ ಅಧ್ಯಕ್ಷರ ನೇಮಕ ಮಾಡೋದಾದ್ರೆ, ಎಂ.ಬಿ.ಪಾಟೀಲ್ʼಗೆ ನೀಡಿ ಎಂದು ಸಿದ್ಧರಾಮಯ್ಯ ರಾಜಕೀಯ ದಾಳ ಉರುಳಿಸಿದ್ದಾರೆ ಎನ್ನುವ ಮಾಹಿತಿ ಇದೆ. ಡಿಕೆ ಶಿವಕುಮಾರ್ʼರನ್ನು ಶತಾಯಗತಾಯ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಹೊರಗಿಡಲು ಪ್ರಯತ್ನಿಸುತ್ತಿರುವ ಸಿಎಂ ಬಣ, ಎಲ್ಲರಿಗೂ ಸರ್ವಸಮ್ಮತ ಆಯ್ಕೆಯಾಗಬಲ್ಲ ಈಶ್ವರ್ ಖಂಡ್ರೆ ಹೆಸರನ್ನೂ ಮುಂದಿಡುತ್ತಿದೆ ಎನ್ನಲಾಗಿದೆ.
ಈಶ್ವರ್ ಖಂಡ್ರೆ, ಸರ್ವಸಮ್ಮತ ಅಭ್ಯರ್ಥಿಯಾಗಿ ಆಯ್ಕೆಯಾದರೂ ಅಚ್ಚರಿಯಿಲ್ಲ. ಕಾರಣ, ಖಂಡ್ರೆ ಲಿಂಗಾಯತ ಸಮುದಾಯಕ್ಕೆ ಸೇರಿದ ಮುಖಂಡ. ಹೇಳಿ ಕೇಳಿ ಕಲ್ಯಾಣ ಕರ್ನಾಟಕ ಭಾಗದವರಾಗಿರುವುದರಿಂದ, ಖರ್ಗೆಯವರ ಕೃಪಾಕಟಾಕ್ಷವೂ ಇದೆ. ಎಲ್ಲರಿಗೂ ಹೊಂದುಕೊಂಡು ಹೋಗಬಲ್ಲ ನಾಯಕನಾಗಿರುವುದರಿಂದ, ಒಂದೊಮ್ಮೆ ಈಶ್ವರ್ ಖಂಡ್ರೆ, ಹೆಸರು ಮುನ್ನಲೆಗೆ ಬಂದಲ್ಲಿ, ಅದಕ್ಕೆ ವಿರೋಧ ವ್ಯಕ್ತವಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಹಾಗಾಗಿ ಈಶ್ವರ್ ಖಂಡ್ರೆ ಹೆಸರನ್ನೂ ಕೆಲವು ನಾಯಕರು ಪ್ರಸ್ತಾಪಿಸುತ್ತಿದ್ದಾರೆ. ದೆಹಲಿಯಲ್ಲಿ ಬೀಡುಬಿಟ್ಟಿರುವ ಉಬಯ ನಾಯಕರು, ಇನ್ಯಾವ ರಾಜಕೀಯ ಪಟ್ಟುಗಳನ್ನು ಹಾಕಲಿದ್ದಾರೆ..? ಮತ್ಯಾವ ರಾಜಕೀಯ ಬೆಳವಣಿಗೆಗಳು ನಡೆಯಲಿವೆ ಅನ್ನೋದನ್ನ ಕಾದು ನೋಡಬೇಕಾಗಿದೆ..!