Ashwaveega News 24×7 ಫೆಬ್ರವರಿ 24 – 2026 : ಶಿವಮೊಗ್ಗ ಜಿಲ್ಲೆಯಲ್ಲಿ ಹೃದಯ ಕಲುಕುವ ಘಟನೆ ನಡೆದಿದೆ. ಊರಗಡೂರು ಗ್ರಾಮದಲ್ಲಿ ಯುವಕ ಸಂಕೇತ್ನ ಅಂತಿಮ ದರ್ಶನ ವೇಳೆ ದುಃಖದ ವಾತಾವರಣ ಆವರಿಸಿತು. ಸಹಪಾಠಿಯ ಮೃತದೇಹವನ್ನು ಕಂಡ ಕ್ಲಾಸ್ಮೇಟ್ಸ್ ಕಣ್ಣೀರಲ್ಲಿ ಮುಳುಗಿದರು.
ಸಂಕೇತ್ ಅಂತಿಮ ದರ್ಶನಕ್ಕಾಗಿ ಶಾಲಾ-ಕಾಲೇಜಿನ ಸ್ನೇಹಿತರು, ಗೆಳೆಯ-ಗೆಳತಿಯರು ಗ್ರಾಮಕ್ಕೆ ಆಗಮಿಸಿದ್ದರು. ಮೃತದೇಹದ ಬಳಿ ನಿಂತು ಕೆಲವರು ಮೌನವಾಗಿ ಕಣ್ಣೀರು ಸುರಿಸಿದರೆ, ಇನ್ನೂ ಕೆಲವರು ಸಂಕೇತ್ನ ದೇಹದ ಮೇಲೆ ಬಿದ್ದು ಬಿಕ್ಕಿ ಅಳುತ್ತಾ ಇದ್ದರು. “ನಿನ್ನಿಲ್ಲದೆ ನಾವು ಹೇಗೆ ?” ಎಂಬ ನೋವು ಅವರ ಕಣ್ಣಲ್ಲಿ ಸ್ಪಷ್ಟವಾಗಿ ಗೋಚರಿಸಿತು.
ಈ ಮನಕಲಕುವ ಕ್ಷಣದಲ್ಲಿ ಧರ್ಮ-ಜಾತಿ ಬೇಧವಿಲ್ಲದ ಮಾನವೀಯತೆ ಮೂಡಿಬಂತು . ಸಂಕೇತ್ನ ಮುಸ್ಲಿಂ ಸ್ನೇಹಿತರು ಕೂಡ ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟರು . ತಮ್ಮ ಪ್ರಿಯ ಗೆಳೆಯನಿಗೆ ಕೊನೆಯ ವಿದಾಯ ಹೇಳುವಾಗ ಅವರಲ್ಲಿದ್ದ ಆತ್ಮೀಯತೆ ಎಲ್ಲರ ಮನವನ್ನು ಮುಟ್ಟಿತು.
ದುಃಖದಲ್ಲಿ ಮುಳುಗಿದ್ದ ಸಂಕೇತ್ನ ತಾಯಿಯನ್ನು ಮುಸ್ಲಿಂ ಬಂಧುಗಳು ಸಮಾಧಾನಪಡಿಸಿದ ದೃಶ್ಯ ಅಲ್ಲಿದ್ದವರ ಕಣ್ಣೀರನ್ನು ಮತ್ತಷ್ಟು ತರಿಸಿತು. “ನಾವು ಇದ್ದೇವೆ” ಎಂದು ಧೈರ್ಯ ತುಂಬಿದ ಕ್ಷಣ ಗ್ರಾಮದಲ್ಲಿ ಮಾನವೀಯತೆಯ ಸ್ಪರ್ಶ ನೀಡಿತು .
ಗ್ರಾಮದ ಜನರು, ಸ್ನೇಹಿತರು, ಬಂಧುಗಳು ಸೇರಿ ಸಂಕೇತ್ಗೆ ಅಂತಿಮ ನಮನ ಸಲ್ಲಿಸಿದರು. ಒಬ್ಬ ಯುವಕನ ಅಕಾಲಿಕ ನಿಧನ ಕುಟುಂಬ ಮಾತ್ರವಲ್ಲ, ಸ್ನೇಹಿತರ ಬದುಕಿನಲ್ಲೂ ದೊಡ್ಡ ಶೂನ್ಯವನ್ನು ಬಿಟ್ಟುಹೋಗಿದೆ .
ಈ ಘಟನೆ ಯುವಕರ ಸ್ನೇಹದ ಬಂಧ ಹಾಗೂ ಸಮಾಜದ ಸೌಹಾರ್ದತೆಯನ್ನು ಒಂದೇ ವೇಳೆ ತೋರಿಸಿದ ಮನಕಲಕುವ ಅಧ್ಯಾಯವಾಗಿ ಉಳಿದಿದೆ.
