Ashwaveega News 24×7 ಜನವರಿ 15 – ಕರ್ನಾಟಕ ರಾಜಕಾರಣದ ದಿಗ್ಗಜರ ಪಾಲಿನ ಕೋಟೆ. ಈ ಮಣ್ಣಿನ ರಾಜಕಾರಣದಲ್ಲಿ ದಶಕಗಳ ಕಾಲ ಅಧಿಪತಿಯಾಗಿ ಮೆರೆದವರು ಹಿರಿಯ ಶಾಸಕ ದಿ. ಶಾಮನೂರು ಶಿವಶಂಕರಪ್ಪ. ‘ಎಸ್ಸೆಸ್’ ಎಂಬ ಎರಡಕ್ಷರದ ಪ್ರಭಾವ ಎಷ್ಟಿತ್ತೆಂದರೆ, ದಾವಣಗೆರೆ ದಕ್ಷಿಣ ಕ್ಷೇತ್ರ ಅಕ್ಷರಶಃ ಕಾಂಗ್ರೆಸ್ನ ಅಜೇಯ ಕೋಟೆಯಾಗಿತ್ತು. ಶಾಮನೂರು ಶಿವಶಂಕರಪ್ಪ ಅವರು ನಿರ್ಗಮಿಸುತ್ತಿದ್ದಂತೆ, ಈ ಕೋಟೆಯ ಒಡೆಯನಿಲ್ಲದ ಸಿಂಹಾಸನಕ್ಕೆ ಈಗ ಉಪಚುನಾವಣೆಯ ರಣಕಹಳೆ ಮೊಳಗಿದೆ.
ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಾಗಿದ್ದ ಲಿಂಗೈಕ್ಯ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಶಾಮನೂರು ಕುಟುಂಬಕ್ಕೆ ಮೊದಲ ಆದ್ಯತೆ ನೀಡಲಿ. ಹಾಗೇನಾದರೂ ಬದಲಾವಣೆ ಮಾಡಿದರೆ ನಮ್ಮ ಬ್ರದರ್ಗೆ ಟಿಕೆಟ್ ಕೊಡಲಿ ಎಂದು ಚನ್ನಗಿರಿ ಕ್ಷೇತ್ರ ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದರು.
ಹಿರಿಯ ಶಾಸಕರ ಜಾಗಕ್ಕೆ ಬರಲು ಕಿರಿಯ ನಾಯಕರ ದಂಡೇ ಸಜ್ಜಾಗಿದೆ. ಒಂದೆಡೆ ಕುಟುಂಬದ ಪರಂಪರೆ ಉಳಿಸಿಕೊಳ್ಳುವ ಹಂಬಲ, ಇನ್ನೊಂದೆಡೆ ದಶಕಗಳಿಂದ ಅವಕಾಶ ವಂಚಿತರಾದ ಅಹಿಂದ ವರ್ಗದ ಆಕ್ರೋಶ. ದಾವಣಗೆರೆ ದಕ್ಷಿಣದ ಈ ಉಪಚುನಾವಣೆ ಕೇವಲ ಒಂದು ಕ್ಷೇತ್ರದ ಮರುಚುನಾವಣೆಯಲ್ಲ, ಇದು ಜಿಲ್ಲೆಯ ಮುಂದಿನ ದಶಕದ ರಾಜಕಾರಣದ ದಿಕ್ಸೂಚಿ, ಈಗ ಕಾಂಗ್ರೆಸ್ನಲ್ಲಿ ಟಿಕೆಟ್ಗಾಗಿ ಬಿಗ್ ಫೈಟ್ ಶುರುವಾಗಿದೆ. ಹಾಗಾದ್ರೆ ಕಾಂಗ್ರೆಸ್ನಲ್ಲಿ ಯಾರೆಲ್ಲ ಆಕಾಂಕ್ಷಿಗಳು ಇದ್ದಾರೆ ? ಎಸ್ಎಸ್ ಕುಟುಂಬದಿಂದ ಯಾರು ಕಣಕ್ಕೆ ಇಳಿಯಲಿದ್ದಾರೆ, ಎಸ್ಎಸ್ ಕುಟುಂಬದ ಹೊರತಾಗಿ ಬೇರೆಯವರಿಗೆ ಕ್ಷೇತ್ರ ಹೋಗುತ್ತಾ?
