Ashwaveega News 24×7 ಫೆಬ್ರವರಿ 03 -2026 – ಬೆಂಗಳೂರು : ರಾಜ್ಯಾದ್ಯಂತ ಕಳೆದ ಎರಡು ತಿಂಗಳಿಂದ ಇ-ಖಾತಾ ಸೇವೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಆಸ್ತಿ ವಹಿವಾಟು ಪ್ರಕ್ರಿಯೆ ತೀವ್ರ ಅಸ್ತವ್ಯಸ್ತತೆಗೆ ಒಳಗಾಗಿದೆ. ಗ್ರಹಣ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ಬಂದ್ ಆಗಿರುವುದರಿಂದ ಸೈಟ್ ಮಾರಾಟ, ನೋಂದಣಿ, ಮ್ಯೂಟೇಶನ್, ಬ್ಯಾಂಕ್ ಸಾಲ, ಸಿಸಿ (CC), ಒಸಿ (OC) ಸೇರಿದಂತೆ ಅನೇಕ ಪ್ರಕ್ರಿಯೆಗಳಿವೆ ..
ಕಾವೇರಿ 0.2 ತಂತ್ರಾಂಶದಲ್ಲಿ ಉಂಟಾದ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಏಕಾಏಕಿ ಕಾವೇರಿ 2.0 ಸಾಫ್ಟ್ವೇರ್ಗೆ ವರ್ಗಾವಣೆ ಮಾಡಿರುವುದೇ ಈ ಗೊಂದಲಕ್ಕೆ ಮೂಲ ಕಾರಣವಾಗಿದೆ . ಆದರೆ ಎರಡು ತಿಂಗಳು ಕಳೆದರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂಬುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಇ-ಖಾತಾ ಇಲ್ಲದ ಕಾರಣ ಬ್ಯಾಂಕ್ಗಳಿಂದ ಗೃಹ ಹಾಗೂ ಅಭಿವೃದ್ಧಿ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಪರಿಣಾಮವಾಗಿ ನಿರ್ಮಾಣ ಹಾಗೂ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ದಿನನಿತ್ಯ ಸಬ್ರಿಜಿಸ್ಟ್ರಾರ್ ಕಚೇರಿ, ನಗರ ಸ್ಥಳೀಯ ಸಂಸ್ಥೆಗಳಿಗೆ ಅಲೆದಾಡುತ್ತಿರುವ ಜನ ಬೇಸತ್ತು ಹೋಗಿದ್ದಾರೆ.
“ತಂತ್ರಾಂಶದ ಸಮಸ್ಯೆ” ಎಂದು ಅಧಿಕಾರಿಗಳು ನೀಡುತ್ತಿರುವ ಉತ್ತರವನ್ನು ಜನ ನಂಬಲು ಸಿದ್ಧರಿಲ್ಲ. “ಒಂದು ಸಾಫ್ಟ್ವೇರ್ ಸರಿಪಡಿಸಲು ಇಷ್ಟೊಂದು ದಿನ ಬೇಕೆ ?” ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದೆ. ಪದೇಪದೇ ಇಂತಹ ತಾಂತ್ರಿಕ ಕಾರಣಗಳಿಂದ ಜನಸಾಮಾನ್ಯರಿಗೆ ತೊಂದರೆ ನೀಡುವುದು ಏಕೆ ಎಂಬ ಅಸಮಾಧಾನ ವ್ಯಾಪಕವಾಗಿದೆ.
ಇ-ಖಾತಾ ಸ್ಥಗಿತದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಭಾರೀ ನಷ್ಟ ಉಂಟಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಆದಾಯದ ಮೇಲೂ ದುಷ್ಪರಿಣಾಮ ಬೀರಿದ್ದು, ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
ಈ ಕುರಿತು ಸಚಿವರು “ಶೀಘ್ರದಲ್ಲೇ ಸಮಸ್ಯೆ ಬಗೆಹರಿಯಲಿದೆ” ಎಂದು ಭರವಸೆ ನೀಡುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವ ಖರ್ಗೆ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡರನ್ನು ಪ್ರಶ್ನಿಸಿದರೂ ಇದೇ ಉತ್ತರ ಲಭ್ಯವಾಗಿದೆ. ಆದರೆ ನಿರಂತರ ವಿಳಂಬದಿಂದ ಜನಸಾಮಾನ್ಯರಲ್ಲಿ ಸರ್ಕಾರ ಹಾಗೂ ಅಧಿಕಾರಿಗಳ ಮೇಲಿನ ವಿಶ್ವಾಸ ಕುಸಿಯುತ್ತಿದೆ.
