Ashwaveega News 24×7 ಸೆ. 11: ಕನ್ನಡ ಚಲನಚಿತ್ರರಂಗದ ಹಿರಿಯ ನಿರ್ದೇಶಕರಾದ ಎಸ್.ನಾರಾಯಣ್ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ. ಅವರ ಸೊಸೆಯೇ (ಮಗನ ಹೆಂಡತಿ) ತಮ್ಮ ಅತ್ತೆ, ಮಾವನ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದು ಆ ದೂರಿನ ಆಧಾರದಲ್ಲಿ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
“ಎಸ್. ನಾರಾಯಣ್ ಹಾಗೂ ಭಾಗ್ಯಲಕ್ಷ್ಮೀಯವರ ಪುತ್ರ ಪವನ್ ಅವರನ್ನು 2021ರಲ್ಲಿ ನಾನು ಮದುವೆಯಾಗಿದ್ದೆ. 2022ರಲ್ಲಿ ನಾನು ಹಾಗೂ ಪವನ್ ಬೇರೆ ಸಂಸಾರ ಹೂಡಿದೆವು. ನಮಗೆ ಒಂದು ಗಂಡು ಮಗುವೂ ಆಯಿತು. ಪವನ್ ಅವರು ಪದವೀಧರ ಅಲ್ಲದಿದ್ದರಿಂದ ನಾನೇ ದುಡಿದು ಸಂಸಾರ ನಡೆಸುತ್ತಿದ್ದೆ. ನನ್ನ ಮಗು ಹುಟ್ಟಿದಾಗಿನಿಂದಲೂ ನಾನೇ ಅದರ ಖರ್ಚು ವೆಚ್ಚಗಳನ್ನು ಭರಿಸಿದ್ದೇನೆ. ಮಗುವಾಗಿ 3 ತಿಂಗಳಾದ ನಂತರ ನಮ್ಮ ಮಾವ (ಎಸ್. ನಾರಾಯಣ್) ತಮ್ಮ ಸ್ವಂತ ಮನೆಗೆ ತಮ್ಮನ್ನು ಆಹ್ವಾನಿಸಿದ್ದರಿಂದ ನಾವು ಅವರು ಹೇಳಿದಂತೆ ಪುನಃ ಅತ್ತೆ, ಮಾವನ ಮನೆಗೆ ಹೋಗಿದ್ದೆವು” ಎಂದು ಪವಿತ್ರಾ ವಿವರಿಸಿದ್ದಾರೆ.
“ಮನೆಗೆ ವಾಪಸ್ಸು ಹೋದ ನಂತರ ಕೆಲವೇ ದಿನಗಳಲ್ಲಿ ಎಸ್. ನಾರಾಯಣ್ ಹಾಗೂ ನನ್ನ ಪತಿ ಪವನ್ ಅವರು ಕಲಾಸಾಮ್ರಾಟ್ ಟೀಂ ಅಕಾಡೆಮಿ ಎಂಬ ಫಿಲ್ಮ್ ಇನ್ಸ್ಟಿಟ್ಯೂಟ್ ಆರಂಭಿಸಿದರು. ಅದಕ್ಕೆ ಬೇಕಾದ ಬಂಡವಾಳಕ್ಕಾಗಿ ಹಣ ಕೊಡುವಂತೆ ನನ್ನ ಪತಿ ಪವನ್ ನನ್ನ ಬಳಿ ಬೇಡಿಕೆಯಿಟ್ಟಿದ್ದರು. ನಾನು ನನ್ನ ತಾಯಿಯ ಒಡವೆಗಳನ್ನು ಒತ್ತೆಯಿಟ್ಟು ಹಣ ತಂದುಕೊಟ್ಟಿದ್ದೆ. ಆದರೆ, ಆ ಸಂಸ್ಥೆ ಲಾಸ್ ಆಗಿ ಮುಚ್ಚಿಹೋಯಿತು. ಕಡೆಗೆ ಅಲ್ಲಿ ಆದ ನಷ್ಟವನ್ನು ತುಂಬಿಕೊಡಲು ನಾನು 10 ಲಕ್ಷ ರೂ.ಗಳ ಸಾಲ ತಂದು ಕೊಟ್ಟಿದ್ದೆ. ಅದರ ಇಎಂಐ ನಾನೇ ಕಟ್ಟುತ್ತಿದ್ದೇನೆ. ಇನ್ನು ಪವನ್, ನನ್ನ ತಾಯಿಯಿಂದ 75,000 ರೂ. ಹಣ ಪಡೆದಿದ್ದಾರೆ”.
ಇಷ್ಟೆಲ್ಲಾ ಸಹಾಯ ಮಾಡಿದರೂ ಕೆಲವು ದಿನಗಳಿಂದ ನನಗೆ ಮತ್ತೆ ಮತ್ತೆ ಹಣ ತಂದು ಕೊಡುವಂತೆ ನನ್ನ ಅತ್ತೆ (ಭಾಗ್ಯಲಕ್ಷ್ಮಿ) ಹಾಗೂ ನನ್ನ ಪತಿ ಪವನ್ ಪೀಡಿಸುತ್ತಿದ್ದರು. ಅದಕ್ಕೆ ನಾನು ಒಪ್ಪಿರಲಿಲ್ಲ. ಅದರಿಂದ ಸಿಟ್ಟಿಗೆದ್ದ ಅವರು ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದಾರೆ. ಮದುವೆ ಅವಧಿಯಲ್ಲೇ ಒಂದು ಲಕ್ಷ ರೂ. ಮೌಲ್ಯದ ಉಂಗುರ ಮತ್ತು ಮದುವೆಯ ಖರ್ಚು ವೆಚ್ಚಕ್ಕಾಗಿ ಸ್ವಲ್ಪ ಹಣವನ್ನೂ ಪಡೆದಿದ್ದಾರೆ” ಎಂದು ಪವಿತ್ರಾ ಅವರು ಆಪಾದಿಸಿದ್ದಾರೆ.
ನಾನೀಗ ನನ್ನ ತವರು ಮನೆಯಲ್ಲಿದ್ದೇನೆ. ಈ ಮಧ್ಯೆ, ನಾನು ಸುಮಾರು ಬಾರಿ ಅವರ ಮನೆಗೆ ಹೋಗಿದ್ದೆನಾದರೂ, ಅವರ ಮನೆಯ ಸೆಕ್ಯುರಿಟಿ ಗಾರ್ಡ್ ಅವರು ಮನೆಯಲ್ಲಿಲ್ಲ ಎಂದು ಹೇಳಿದ್ದರಿಂದ ನಾನು ವಾಪಸ್ಸು ಬರಬೇಕಾಯಿತು. ನನಗೆ, ನನ್ನ ಮಗನಿಗೆ ಏನಾದರೂ ತೊಂದರೆಯಾದರೆ ಅದಕ್ಕೆ ಎಸ್. ನಾರಾಯಣ್, ಅವರ ಪತ್ನಿ ಭಾಗ್ಯಲಕ್ಷ್ಮಿ ಹಾಗೂ ಅವರ ಪುತ್ರ ಪವನ್ ಅವರೇ ಕಾರಣ. ಇವರ ಜೊತೆಗೆ ನನ್ನ ತಂದೆ ಶಿವಕುಮಾರ್ ಅವರೇ ಕಾರಣ. ಅಲ್ಲದೆ, ಎಸ್. ನಾರಾಯಣ್, ಭಾಗ್ಯಲಕ್ಷ್ಮಿ ಹಾಗೂ ಪವನ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಪವಿತ್ರಾ ಆರೋಪಿಸಿದ್ದಾರೆ.
