Ashwaveega News 24×7 ಮಾರ್ಚ್ 24 – 2026 ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಹೊಸ ತಲೆಮಾರಿನ ಸಿನಿಮಾ ಮೇಕರ್ಸ್ಗಳು ವಿಶ್ವ ಮಟ್ಟದ ಸಿನಿಮಾಗಳ ನಿರ್ಮಾಣದತ್ತ ಗಮನ ಹರಿಸುತ್ತಿರುವ ಹಿನ್ನಲೆಯಲ್ಲಿ, ಮತ್ತೊಂದು ಮಹತ್ವಾಕಾಂಕ್ಷಿ ಪ್ಯಾನ್ ಏಷಿಯಾ ಚಿತ್ರ ರೂಪುಗೊಳ್ಳುತ್ತಿದೆ. ಈ ಬಹುಭಾಷಾ ಯೋಜನೆಯಲ್ಲಿ ನಾಯಕನಾಗಿ Rajavardhan ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಹಿರಿಯ ನಟ Dingri Nagaraj ಅವರ ಪುತ್ರನಾದ ರಾಜವರ್ಧನ್, ಈಗಾಗಲೇ ನಾಲ್ಕು ವಿಭಿನ್ನ ಶೈಲಿಯ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಈವರೆಗಿನ ಅನುಭವ ಮತ್ತು ದೊಡ್ಡ ಕನಸಿನ ಹುಡುಕಾಟವೇ ಈ ಪ್ಯಾನ್ ಏಷಿಯಾ ಪ್ರಯತ್ನಕ್ಕೆ ಕಾರಣವಾಗಿದೆ.

ಚಿತ್ರದ ಮುಹೂರ್ತವನ್ನು ಪುರಾತನ ಗಣಪತಿ ದೇವಸ್ಥಾನದಲ್ಲಿ ನೆರವೇರಿಸಲಾಗಿದ್ದು, ಇದು ತಂಡದ ಭಕ್ತಿಭಾವ ಮತ್ತು ಶ್ರದ್ಧೆಯನ್ನು ತೋರಿಸುತ್ತದೆ. ಕಳೆದ ಸುಮಾರು ಐದು ವರ್ಷಗಳಿಂದ ಪ್ರಬಲ ತಂತ್ರಜ್ಞರ ತಂಡದೊಂದಿಗೆ ಈ ಚಿತ್ರಕ್ಕಾಗಿ ಪೂರ್ವ ತಯಾರಿ ನಡೆಸಲಾಗಿದ್ದು, ಇದೀಗ ಅಂತಿಮ ಹಂತ ತಲುಪಿದೆ.
ಇತ್ತೀಚಿನ ವರ್ಷಗಳಲ್ಲಿ K.G.F, Kantara, RRR ಮತ್ತು Baahubali ಹೀಗೆ ದಕ್ಷಿಣ ಭಾರತದ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಭಾರತೀಯ ಚಿತ್ರರಂಗದ ಹೆಗ್ಗಳಿಕೆಯನ್ನು ಹೆಚ್ಚಿಸಿವೆ. ಇದೇ ಹಾದಿಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸುವ ಉದ್ದೇಶದಿಂದ ಈ ಹೊಸ ಯೋಜನೆ ಆರಂಭವಾಗಿದೆ.
ಕಳೆದ ಒಂದು ವರ್ಷದಿಂದ ನಟನೆಯಿಂದ ದೂರ ಉಳಿದಿದ್ದ ರಾಜವರ್ಧನ್, ಈ ಚಿತ್ರದ ತಯಾರಿಯಲ್ಲೇ ಸಂಪೂರ್ಣ ತೊಡಗಿಸಿಕೊಂಡಿದ್ದರೆಂಬುದು ತಿಳಿದುಬಂದಿದೆ. ಬಹುಮುಖ ಪ್ರತಿಭೆಯುಳ್ಳ ಅವರು ಈ ಚಿತ್ರವನ್ನು ತಮ್ಮ ಸಿನಿ ಪಯಣದ ಮಹತ್ವದ ಹಂತವೆಂದು ಪರಿಗಣಿಸಿದ್ದಾರೆ.
ರಾಜವರ್ಧನ್ ಹೇಳುವುದೇನೆಂದರೆ:
“‘ಬಿಚ್ಚುಗತ್ತಿ’ದಿಂದ ‘ಗಜರಾಮ’ವರೆಗೆ ಮಾಡಿದ ಎಲ್ಲಾ ಸಿನಿಮಾಗಳು ನನಗೆ ಪಾಠ ಕಲಿಸಿವೆ. ‘ಕಮಲ್ ಶ್ರೀದೇವಿ’ ಚಿತ್ರದ ಮೂಲಕ ನಿರ್ಮಾಪಕ ಹಾಗೂ ಕ್ರಿಯೇಟೀವ್ ಹೆಡ್ ಆಗಿ ಕೆಲಸ ಮಾಡಿದ ಅನುಭವ ಸಿನಿಮಾದ ಒಳಹೊರಗಿನ ಜ್ಞಾನ ನೀಡಿದೆ. ನಾನು ಮೂಲತಃ ವಿದ್ಯಾರ್ಥಿ, ಇನ್ನೂ ಕಲಿಯುತ್ತಲೇ ಇದ್ದೇನೆ. ಈಗ ಪ್ರಾರಂಭವಾಗುತ್ತಿರುವ ಈ ಚಿತ್ರವೇ ನನ್ನ ನಿಜವಾದ ಸಿನಿಮಾ ಪಯಣದ ಆರಂಭವೆಂದು ಭಾಸವಾಗುತ್ತಿದೆ. ವಿಶ್ವಮಟ್ಟದ ಸಿನಿಮಾ ಮಾಡುವ ಸಾಮರ್ಥ್ಯ ಹೊಂದಿರುವ ತಂಡ ನನ್ನ ಜೊತೆಗಿದೆ. ಉಳಿದ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇನೆ” ಎಂದು ತಿಳಿಸಿದ್ದಾರೆ.
