Ashwaveega News 24×7 ಡಿಸೆಂಬರ್. 10: ರೇಣುಕಾಸ್ವಾಮಿ ಕೇಸ್ ನಲ್ಲಿ ಸಿಲುಕಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ನಡುವೆ ನಾಳೆ ಅಂದರೆ ಡಿ.11 ರಂದು ‘ದಿ ಡೆವಿಲ್’ ಸಿನಿಮಾ ರಿಲೀಸ್ ಆಗಲಿದೆ. ದರ್ಶನ್ ಅನುಪಸ್ಥಿತಿಯಲ್ಲಿ ಡೆವಿಲ್ ಚಿತ್ರ ರಿಲೀಸ್ ಆಗ್ತಿದ್ದು, ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿದೆ.
ಹೀಗಾಗಿ ಜೈಲಿನಿಂದಲೇ ದರ್ಶನ್ ತಮ್ಮ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮೀ ಮೂಲಕ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರವನ್ನು ತಲುಪಿಸಿದ್ದಾರೆ. ಅದನ್ನು ವಿಜಯಲಕ್ಷ್ಮೀ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
“ನನ್ನ ಹೃದಯದಿಂದ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ಈ ಸಂದೇಶ ಕಳುಹಿಸುತ್ತಿದ್ದೇನೆ.. ವಿಜಿ ನಿಮ್ಮೆಲ್ಲರಿಗೂ ನನ್ನ ಸಂದೇಶವನ್ನು ತಲುಪಿಸುತ್ತಾಳೆ.. ನಿಮ್ಮೆಲ್ಲರ ಪ್ರೀತಿ, ಕಾಳಜಿ, ಬೆಂಬಲ, ನನ್ನ ಸಿನಿಮಾ ಪ್ರಚಾರ ಬಗ್ಗೆ ಪ್ರತಿ ಬಾರಿಯೂ ವಿಜಿ ತಿಳಿಸುತ್ತಿದ್ದಾಳೆ. ದೂರ ಇದ್ದರೂ ಪ್ರತಿ ಕ್ಷಣವೂ ನಿಮ್ಮ ಉಪಸ್ಥಿತಿಯನ್ನು ನಾನು ಅನುಭವಿಸುತ್ತೇನೆ.
ನಾನು ಹೇಳೋದು ಏನೆಂದರೆ ಯಾರು ಏನೇ ಹೇಳಿದರೂ ಚಿಂತಿಸಬೇಡಿ. ಯಾವುದೇ ವದಂತಿ, ನೆಗೆಟಿವಿಟಿಗೆ ಕಿವಿಕೊಡಬೇಡಿ. ನೀವು ನನ್ನ ಶಕ್ತಿ, ನೀವು ನನ್ನ ಕುಟುಂಬ. ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಯಿಂದಾಗಿ ನಾನು ನಿಂತಿದ್ದೇನೆ. ನನ್ನ ಜೀವನದ ಈ ಹಂತದಲ್ಲಿ, ದೊಡ್ಡ ಶಕ್ತಿ ನೀವೇ. ಈ ಸಮಯದಲ್ಲಿ ನಾನು ಬಯಸುವುದು ಒಂದೇ. ನಮ್ಮ ಡೆವಿಲ್ ಸಿನಿಮಾ ಕಡೆಗೆ ಗಮನ ಹರಿಸಬೇಕು. ನನಗೆ ತೋರಿಸಿದ ಪ್ರೀತಿಯನ್ನು ಡೆವಿಲ್ಗೂ ತೋರಿಸಿ.
ನನ್ನ ಅನುಪಸ್ಥಿತಿಯಲ್ಲಿಯೂ ಸಹ, ನೀವು ಪ್ರತಿಯೊಂದು ಪ್ರಶ್ನೆಗೆ, ಅನುಮಾನಕ್ಕೆ, ಧ್ವನಿಗೆ ಉತ್ತರಿಸಬೇಕು. ನನ್ನ ಸಿನಿಮಾಗೆ ನೀವು ಮಾಡ್ತಿರೋ ಪ್ರಚಾರ, ಶ್ರಮ ಮತ್ತು ನಿಮ್ಮ ಒಗ್ಗಟ್ಟಿನ ಬಗ್ಗೆ ಕೇಳಿದಾಗ ನನಗೆ ಹೆಮ್ಮೆ ಮತ್ತು ಭಾವುಕನಗುತ್ತೇನೆ. ನಿಮ್ಮನ್ನೆಲ್ಲ ಮತ್ತೆ ಭೇಟಿಯಾಗುವ ದಿನಕ್ಕಾಗಿ ಕಾಯುತ್ತಿರೋದೇ ಖುಷಿ ಕೊಡ್ತಿದೆ.
ನನ್ನ ಸುತ್ತಲೂ ಗೋಡೆಯಂತೆ ನಿಂತಿದ್ದಕ್ಕಾಗಿ ಧನ್ಯವಾದಗಳು. ನೀವು ನನ್ನನ್ನು ಎಷ್ಟು ನಂಬುತ್ತಿರೋ ನಾನು ನನ್ನ ಸೆಲೆಬ್ರಿಟಿಗಳನ್ನ ಅಷ್ಟೇ ನಂಬುತ್ತಿನಿ. ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಎಲ್ಲವನ್ನೂ ಉತ್ತರಿಸುತ್ತದೆ. ಅಲ್ಲಿವರೆಗೂ ತಲೆಯನ್ನೆತ್ತಿ, ಹೃದಯ ಬಲವಾಗಿರಲಿ, ಪ್ರೀತಿ ಅಚಲವಾಗಿರಲಿ.
ನಿಮ್ಮ ಪ್ರೀತಿಯ ದಾಸ, ದರ್ಶನ್
ದರ್ಶನ್ ಮೇಲಿನ ಆರೋಪಗಳು ನಕಲಿ, ಆಧಾರರಹಿತ ಮತ್ತು ದುರುದ್ದೇಶಪೂರಿತವಾಗಿದೆ. ನಾನೇ ಖುದ್ದಾಗಿ ಜೈಲಿಗೆ ತೆರಳಿ ಈ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಅಂತ ವಿಜಯಲಕ್ಷ್ಮಿ ಸ್ಪಷ್ಟಪಡಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಕಿರುವ ವಿಜಯಲಕ್ಷ್ಮಿ, ಸತ್ಯವು ಸ್ವಲ್ಪ ಸಮಯದವರೆಗೆ ಮೌನವಾಗಿರಬಹುದು, ಆದರೆ ಅದು ಎಂದಿಗೂ ತಲೆಬಾಗುವುದಿಲ್ಲ. ಸುಳ್ಳುಗಳು ಜೋರಾಗಿ ಇರುತ್ತವೆ. ಆದರೆ ಅದು ಕೆಲವು ಸಮಯ ಅಂತ ವಿರೋಧಿಗಳಿಗೆ ವಿಜಯಲಕ್ಷ್ಮಿ ತಿರುಗೇಟು ನೀಡಿದ್ದಾರೆ
